ನವದೆಹಲಿ: ಭಾರತದ ಅಭಿವೃದ್ಧಿಗಾಗಿ ಬೇಕಿರುವ ಸಂಪನ್ಮೂಲಗಳ ಕೊರತೆ ಇಲ್ಲ ಆದರೆ ಒಳ್ಳೆಯ ಆಡಳಿತದಲ್ಲಿ ಕೊರತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಗಳಲ್ಲಿರುವ ಸರ್ಕಾರಗಳ ಆಡಳಿತ ಯಂತ್ರ ದಕ್ಷವಾಗಿದ್ದು, ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವೆಡೆಗಳಲ್ಲಿ ಬದಲಾವಣೆಗಳು ಕಾಣುತ್ತಿವೆ ಎಂದು ಮೋದಿ ಹೇಳಿದ್ದಾರೆ. ಆರ್ ಎಸ್ಎಸ್, ಜನಸಂಘದ ನಾಯಕ ನಾನಾಜಿ ದೇಶ್ ಮುಖ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ,
ರಾಜ್ಯಗಳಲ್ಲಿ ಬಡತನ ಹೆಚ್ಚಿರುವೆಡೆ ಮನ್ರೇಗಾ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಕೆಲಸ ಹಂಚಿಕೆ ಕಡಿಮೆ ಇದೆ. ಉತ್ತಮ ಆಡಳಿತ ಇರುವ ರಾಜ್ಯಗಳಲ್ಲಿ ಮನ್ರೇಗಾ ಅಡಿಯಲ್ಲಿ ಉದ್ಯೋಗಗಳು ಹೆಚ್ಚಿದ್ದು, ಬಡತನವೂ ಕಡಿಮೆ ಇದೆ ಎಂದು ಮೋದಿ ಹೇಳಿದ್ದು, ಕೇವಲ ಒಳ್ಳೆಯ ಆಡಳಿತದ ಇಚ್ಛೆ ಇದ್ದರೆ ಸಾಲದು, ಅದಕ್ಕೆ ತಕ್ಕಂತೆ ನಿಗದಿತ ಸಮಯದಲ್ಲಿ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಮನ್ರೇಗಾ ಯೋಜನೆಗಳಂತಹ ಉದ್ದೇಶವನ್ನು ಮರೆಯಬಾರದು, ಅಭಿವೃದ್ಧಿಯ ಫಲಾನುಭವಿಗಳಿಗೆ ತಲುಪಬೇಕು, ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ 2022 ರ ವೇಳೆಗೆ ಕಳೆದ 70 ವರ್ಷಗಳ ಕಾಲ ಕಂಡ ಕನಸು ನನಸಾಗಲಿದೆ ಎಂದು ಮೋದಿ ಹೇಳಿದ್ದಾರೆ. ಕೇವಲ ಮತದಾನ ಮಾಡುವ ಮೂಲಕ ಮಾತ್ರ ಪ್ರಜಾಪ್ರಭುತ್ವವವನ್ನು ಉಳಿಸಲು ಸಾಧ್ಯವಿಲ್ಲ, ಅಭಿವೃದ್ಧಿ ಯೋಜನೆಯಲ್ಲಿ ಜನರು ಭಾಗಿದಾರರಾದಾಗಲೇ ಪ್ರಜಾಪ್ರಭುತ್ವವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.