ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ಹೇರಲಾಗಿರುವ ನಿಷೇಧ ತೀರ್ಪನ್ನು ಮರು ಪರಿಶೀಲಿಸುವಂತೆ ದೆಹಲಿಯ ಪಟಾಕಿ ಮಾರಾಟಗಾರರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲೀನ್ಯ ನಿಯಂತ್ರಣಕ್ಕಾಗಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ನಿಷೇಧ ಹೇರಿತ್ತು. ಇದೀಗ ಸುಪ್ರೀಂ ಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ದೆಹಲಿ ಪಟಾಕಿ ಮಾರಾಟಗಾರರ ಸಂಘ ಮರುಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಿದೆ. ಸುಪ್ರೀಂ ಕೋರ್ಟ್ ನ ತೀರ್ಪಿನಿಂದಾಗಿ ಪಟಾಕಿ ಮಾರಾಟವನ್ನೇ ನೆಚ್ಚಿಕೊಂಡಿರುವ ಮಾರಾಟಗಾರರ ಕುಟುಂಬಗಳು ಬೀದಿಗೆ ಬೀಳಲಿವೆ. ಹೀಗಾಗಿ ಕೋರ್ಟ್ ತನ್ನ ತೀರ್ಪನ್ನು ಮರು ಪರಿಶೀಲನೆ ನಡೆಸಬೇಕು ಎಂದು ಮಾರಾಟಗಾರರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಮುಂಬರುವ ನವೆಂಬರ್ 1ರ ತನಕ ಪಟಾಕಿ ಸಿಡಿಸುವುದಕ್ಕೆ ಸುಪ್ರೀಂ ಕೋರ್ಟ್ ನಿಷೇಧ ವಿಧಿಸಿತ್ತು. ಇದೇ ಅಕ್ಟೋಬರ್ ದೀಪಾವಳಿ ಹಬ್ಬದ ತಿಂಗಳಾದ್ದರಿಂದ ಪಟಾಕಿ ಮಾರಾಟ ಮತ್ತು ಪಟಾಕಿ ಬಳಕೆ ಹೆಚ್ಚು ಮಾಡುವುದರಿಂದ ದೆಹಲಿಯಲ್ಲಿ ವಾಯುಮಾಲೀನ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸುಪ್ರೀಂ ಕೋರ್ಟ್ ಪಟಾಕಿ ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಿತ್ತು.
ಈ ಹಿಂದೆ ಅಂದರೆ ಸೆಪ್ಟೆಂಬರ್ ನಲ್ಲೂ ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಪಟಾಕಿ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತ್ತು. ಮದುವೆ ಸಮಾರಂಭಗಳು ಹೆಚ್ಚಿರುವ ಈ ಸಮಯದಲ್ಲಿ ಪಟಾಕಿ ಬಳಕೆ ಅತ್ಯಧಿಕವಾಗುವುದರಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಇದಕ್ಕಾಗಿ ದೆಹಲಿ ಮತ್ತು ದೆಹಲಿ ವಲಯದಲ್ಲಿ (ಎನ್ಸಿಆರ್) ತಕ್ಷಣದಿಂದಲೇ ಜಾರಿಗೆ ಬರುವಂತೆ ಪಟಾಕಿ ನಿಷೇಧ ಜಾರಿಗೆ ತರಲಾಗಿತ್ತು. ಅಂತೆಯೇ ಮುಂದಿನ ಆದೇಶದವರೆಗೂ ಪಟಾಕಿ ಮಾರಾಟಗಾರರ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಸುಪ್ರೀಂ ಹೇಳಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos