ದೇಶ

ಪಟಾಕಿ ನಿಷೇಧ ಭಾರತದಲ್ಲಿ ಹಿಂದೂ ಹಬ್ಬಗಳ ಆಚರಣೆ ಉತ್ಸಾಹವನ್ನು ನಾಶ ಮಾಡುತ್ತದೆ: ಶಿವಸೇನೆ

Sumana Upadhyaya
ಮುಂಬೈ: ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮಾರಾಟಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಆದೇಶದ ಪ್ರಸ್ತುತತೆಯನ್ನು ಪ್ರಶ್ನಿಸಿದ ಶಿವಸೇನೆ, ಭಾರತದಲ್ಲಿ ಹಿಂದೂ ಹಬ್ಬಗಳ ಉತ್ಸಾಹವನ್ನು ಇದು ಕೊನೆಗಾಣಿಸುತ್ತದೆ ಎಂದು ಆರೋಪಿಸಿದೆ.
ವಾಯುಮಾಲಿನ್ಯ ಅಧಿಕವಾಗುತ್ತದೆ ಎಂಬ ಕಾರಣದ ಹಿನ್ನೆಲೆಯಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಪಟಾಕಿಗಳ ಮಾರಾಟಕ್ಕೆ ಈ ವರ್ಷ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಆದರೆ ಈ ನಿಷೇಧದಿಂದ ವಾಯು ಮಾಲಿನ್ಯದ ಮೇಲೆ ಯಾವ ರೀತಿ ಮತ್ತು ಎಷ್ಟು ಪರಿಣಾಮ ಬೀರಬಹುದು ಎಂಬುದು ಗೊತ್ತಿಲ್ಲ ಎಂದು ಶಿವ ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಪಟಾಕಿ ಮಾರಾಟವನ್ನು ನಂಬಿಕೊಂಡು ಬದುಕುತ್ತಿರುವ ಪಟಾಕಿ ಉತ್ಪಾದಕರು ಮತ್ತು ಮಾರಾಟಗಾರರ ಮೇಲೆ ಪಟಾಕಿ ಮಾರಾಟ ನಿಷೇಧ ಪರಿಣಾಮ ಬೀರಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಪಟಾಕಿ ಮಾರಾಟ ನಿಷೇಧಿಸುವ ಮುನ್ನ ಅದನ್ನು ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ಪರ್ಯಾಯ ಜೀವನೋಪಾಯ ಕಲ್ಪಿಸಲಾಗಿದೆಯೇ ಎಂದು ಸಾಮ್ನಾದಲ್ಲಿ ಪ್ರಶ್ನಿಸಲಾಗಿದೆ.
ಅಧಿಕಾರಿಗಳು ಪಟಾಕಿ ತಯಾರಕರು ಮತ್ತು ಮಾರಾಟಗಾರರಿಗೆ ಪರ್ಯಾಯ ಜೀವನ ವ್ಯವಸ್ಥೆ ಕಲ್ಪಿಸಿದೆಯೇ ಅಥವಾ ರೈತರಂತೆ ಅವರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕೆ ಎಂದು ಶಿವಸೇನೆ ಖಾರವಾಗಿ ಪ್ರಶ್ನಿಸಿದೆ.
ಪಟಾಕಿಗಳನ್ನು ನಿಷೇಧಿಸಿದರೆ ಬೆಳಕಿನ ಹಬ್ಬ ದೀಪಾವಳಿಯ ಶಾಂತಿಗೆ ಅಡ್ಡಿಪಡಿಸಿದಂತೆ ಆಗುತ್ತದೆ. ಇದರಿಂದ ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದರೂ ಕೂಡ ಮುಂಬೈ ನಗರದ ಚರಂಡಿಗಳಲ್ಲಿ ಇನ್ನು ಕೂಡ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಾಣುತ್ತೇವೆ ಎಂದಿದೆ.
ಪ್ರಧಾನಿ ಮೋದಿಯವರ ಅನಾಣ್ಯೀಕರಣ ಕ್ರಮವನ್ನು ಟೀಕಿಸಿದ ಶಿವಸೇನೆ, ಮೋದಿಯವರ ನೋಟು ನಿಷೇಧ ದೇಶದ ಜನತೆಗೆ ಆಘಾತವನ್ನುಂಟುಮಾಡಿತ್ತು. ನೋಟುಗಳ ಅಮಾನ್ಯತೆ ಹರಡಿರುವ ಮಾಲಿನ್ಯದ ಹೊರೆಯನ್ನು ಭಾರತದ ಜನತೆ ಹೊರಬೇಕಾಗಿದೆ ಎಂದು ಟೀಕಿಸಿದೆ.
ಶಾಸಕಾಂಗ ಮತ್ತು ನ್ಯಾಯಾಂಗ ದೇಶದ ಜನತೆಗೆ ಮೂಲಭೂತ ಸೌಕರ್ಯ ಒದಗಿಸದಿದ್ದರೆ ಸಂಪ್ರದಾಯ, ಆಚರಣೆಗಳನ್ನು ನಿಷೇಧಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದೆ.
ನವೆಂಬರ್ 1ರವರೆಗೆ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮಾರಾಟಕ್ಕೆ ಕಳೆದ ಸೋಮವಾರ ಸುಪ್ರೀಂ ಕೋರ್ಟ್ ನಿಷೇಧ ಹೇರಿತ್ತು.
SCROLL FOR NEXT