ತಿರುಪುರ: ತನ್ನ ಸ್ನೇಹಿತನಿಂದಲೇ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದ್ದು, ಘಟನೆಯಿಂದ ತೀವ್ರವಾಗಿ ಮನನೊಂದ ಬಾಲಕಿಯ ಪೋಷಕರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಿರುಪುರದಲ್ಲಿ ನಡೆದಿದೆ.
ರಾಜಗೋಪಾಲ್ (37), ಅನಿತಾ (32) (ಹೆಸರು ಬದಲಿಸಲಾಗಿದೆ) ಆತ್ಮಹತ್ಯೆಗೆ ಶರಣಾದ ದಂಪತಿಗಳಾಗಿದ್ದು, ಪಾಂಡಿಚೆರಿಯ ಕಥಿರ್ಕಮ್ಬಮ್ ಮೂಲದವರಾಗಿದ್ದಾರೆ.
ರಾಜಗೋಪಾಲ್ ಹಾಗೂ ಅನಿತಾ ಇಬ್ಬರೂ ದಿನಗೂಲಿ ಕೆಲಸಗಾರರಾಗಿದ್ದು, ದಂಪತಿಗಳಿಬ್ಬರಿಗೂ ಇಬ್ಬರು ಹೆಣ್ಣುಮಕ್ಕಳು ಹಾಗೂ ಮೂವರು ಗಂಡುಮಕ್ಕಳಿದಿದ್ದಾರೆ. 12ನೇ ತರಗತಿ ಓದುತ್ತಿರುವ ಮೊದಲ ಪುತ್ರಿ ಪ್ರೀತಿಯಲ್ಲಿ ಬಿದ್ದಿದ್ದಳು. ಇದರಂತೆ ಬಾಲಕಿಯ ಮೇಲೆ ಯುವಕ ಅತ್ಯಾಚಾರ ಮಾಡಿದ್ದ. ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ದ ದೂರು ದಾಖಲಿಸಿದ್ದರು.
ದೂರಿನಂತೆ ಪೋಸ್ಕೋ ಕಾಯ್ದೆಯಡಿಯಲ್ಲಿ ಯುವಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯುವಕನನ್ನು ಬಂಧನಕ್ಕೊಳಪಡಿಸಿದ್ದರು. ಆದರೆ, ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ನಡೆದಿದ್ದರಿಂದಾಗಿ ದಂಪತಿಗಳಿಬ್ಬರು ತೀವ್ರವಾಗಿ ಮನನೊಂದಿದ್ದರು. ಇದರಂತೆ ಬಾಲಕಿಗೆ ಪಾಂಡಿಚೆರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಪುತ್ರಿಯೊಂದಿಗೆ ದಂಪತಿಗಳಿಬ್ಬರೂ ವಿಲ್ಲುಪುರಂಗೆ ತೆರಳಿದ್ದರು. ಬಳಿಕ ದಿಂಡಿಗುಲ್, ತಿರುಪುರ್ ಮತ್ತು ಪಳನಿಗೆ ಹೋಗಿದ್ದಾರೆ.
ಶುಕ್ರವಾರ ಸಂಜೆ ತಿರುಪುರ್ ವಾಪಸ್ಸಾಗಿದ್ದಾರೆ. ಧರಂಪುರಂ ರಸ್ತೆಯಲ್ಲಿರುವ ಕೊವಿಲ್ ವಝಿ ಬಸ್ ನಿಲ್ದಾಣದ ಬಳಿ ಬಂದಿರುವ ದಂಪತಿಗಳು ಜ್ಯೂಸ್ ನಲ್ಲಿ ವಿಷ ಬೆರೆಸಿಕೊಂಡು ಕುಡಿದ್ದಾರೆ. ಪೋಷಕರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದುನ್ನು ಕಂಡ ಬಾಲಕಿ ಜೋರಾಗಿ ಕಿರುಚಿದ್ದಾಳೆ. ಬಾಲಕಿಯ ಕೂಗಾಟ ಕೇಳಿದ ಸ್ಥಳೀಯರು ಆ್ಯಂಬುಲೆನ್ಸ್ ಕರೆದಿ ತಿರುಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡುವಷ್ಟರಲ್ಲಿ ರಾಜಗೋಪಾಲ್ ಅವರು ಮೃತಪಟ್ಟಿದ್ದಾರೆ. ಅನಿತಾ ಅವರ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನಲೆಯಲ್ಲಿ ಕೊಯಿಮತ್ತೂರ್ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅನಿತಾ ಅವರು ಮೃತಪಟ್ಟಿದ್ದಾರೆ. ಇದೀಗ ಬಾಲಕಿಯನ್ನು ತಿರುಪುರ ಬಾಲಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.