ಹೈದರಾಬಾದ್: 'ದ್ರೋಹಿಗಳು' ಕೆಂಪು ಕೋಟೆಯನ್ನೂ ನಿರ್ಮಿಸಿದ್ದಾರೆ; ಹಾಗಂತ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ಧ್ವಜಾರೋಹಣ ಮಾಡುವುದನ್ನು ನಿಲ್ಲಿಸುತ್ತಾರಾ? ಎಂದು ಎಐಎಂಐಎಂ ಅಸಾದುದ್ದೀನ್ ಒವೈಸಿ ಅವರು ಸೋಮವಾರ ಪ್ರಶ್ನಿಸಿದ್ದಾರೆ.
'ಐತಿಹಾಸಿಕ ತಾಜ್ಮಹಲ್ ಕಟ್ಟಡವನ್ನು ನಿರ್ಮಿಸಿದವರು ದ್ರೋಹಿಗಳು' ಎಂಬ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಹೇಳಿಕೆ ಪ್ರತಿಕ್ರಿಯಿಸಿದ ಒವೈಸಿ, ಕೇಂದ್ರ ಸರ್ಕಾರ ಪ್ರೇಮ ಸೌಧ ತಾಜ್ ಮಹಲ್ ಗೆ ಭೇಟಿ ನೀಡದಂತೆ ಪ್ರವಾಸಿಗರಿಗೆ ಸೂಚಿಸಲಿ ಎಂದಿದ್ದಾರೆ.
'ದ್ರೋಹಿಗಳು' ಕೆಂಪು ಕೋಟೆಯನ್ನು ಸಹ ನಿರ್ಮಿಸಿದ್ದಾರೆ; ಹಾಗಂತ ಪ್ರಧಾನಿ ಮೋದಿ ಅಲ್ಲಿ ಧ್ವಜಾರೋಹಣ ಮಾಡುವುದನ್ನು ನಿಲ್ಲಿಸುತ್ತಾರಾ? ಮೋದಿ ಮತ್ತು ಯೋಗಿ ದೇಶ ಹಾಗೂ ವಿದೇಶದ ಪ್ರವಾಸಿಗರಿಗೆ ತಾಜ್ ಮಹಲ್ ಗೆ ಭೇಟಿ ನೀಡದಂತೆ ಸೂಚಿಸುತ್ತಾರೆಯೇ? ಎಂದು ಹೈದರಾಬಾದ್ ಸಂಸದ ಒವೈಸಿ ಟ್ಟೀಟ್ ಮಾಡಿದ್ದಾರೆ.
ತಾಜ್ ಮಹಲ್ ಮತ್ತು ಕೆಂಪು ಕೋಟೆ ಮಾತ್ರವಲ್ಲ, ದೆಹಲಿಯಲ್ಲಿ ವಿದೇಶಿ ಗಣ್ಯರಿಗೆ ಆತಿಥ್ಯ ನೀಡುವ ಹೈದರಾಬಾದ್ ಹೌಸ್ ಸಹ ದ್ರೋಹಿಗಳು ನಿರ್ಮಿಸಿದ್ದಾರೆ. ಹೀಗಾಗಿ ಮೋದಿ ಅಲ್ಲಿ ನಡೆಯುವ ವಿದೇಶಿ ಗಣ್ಯರ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಾರಾ? ಎಂದು ಒವೈಸಿ ಪ್ರಶ್ನಿಸಿದ್ದಾರೆ.
ನಿನ್ನೆ ಉತ್ತರ ಪ್ರದೇಶ ಸಿಸೋಲಿ ಗ್ರಾಮದಲ್ಲಿ ಮಾತನಾಡಿದ್ದ ಶಾಸಕ ಸೋಮ್ ಅವರು, "ಐತಿಹಾಸಿಕ ತಾಜ್ ಮಹಲ್ ಕಟ್ಟಡವನ್ನು ಕಟ್ಟಿದವರು ದ್ರೋಹಿಗಳು; ಆದುದರಿಂದ ಅದಕ್ಕೆ ಭಾರತೀಯ ಇತಿಹಾಸದಲ್ಲಿ ಯಾವುದೇ ಸ್ಥಾನ ಇಲ್ಲ. ತಾಜ್ಮಹಲ್ ಭಾರತೀಯ ಸಂಸ್ಕೃತಿಯಲ್ಲಿನ ಒಂದು ಕಪ್ಪು ಚುಕ್ಕೆ' ಎಂದು ಗುಡುಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos