ಹೆದ್ದಾರಿಯಲ್ಲಿ ಇಳಿದ ವಾಯು ಸೇನೆಯ ಮಿರಾಜ್ ಯುದ್ಧ ವಿಮಾನ
ಆಗ್ರಾ: ಲಖನೌ-ಆಗ್ರಾ ಎಕ್ಸ್ ಪ್ರೆಸ್ ವೇ ನಲ್ಲಿ ನಡೆಯುತ್ತಿರುವ ವಾಯು ಸೇನೆಯ ಯುದ್ಧ ವಿಮಾನಗಳ ಭೂಸ್ಪರ್ಶ ತರಬೇತಿ ಕಾರ್ಯಕ್ರಮ ಅತ್ಯಂದ ಮಹತ್ವದ್ದಾಗಿದ್ದು, ಕಾರಣಾಂತರಗಳಿಂದ ಸೇನೆಯ ರನ್ ವೇಗಳು ಅಲಭ್ಯವಾದಾಗ ಅಥವಾ ನಿರಾಕರಿಸಿದಾಗ ಹೈವೇಗಳು ಪ್ರಮುಖವಾಗುತ್ತವೆ ಎಂದು ಏರ್ ಮಾರ್ಷಲ್ ಎಸ್ ಬಿ ಡಿಯೋ ಅವರು ತಿಳಿಸಿದ್ದಾರೆ.
ಇಂದು ಉತ್ತರ ಪ್ರದೇಶದ ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇ ನಲ್ಲಿ ಸೇನೆಯ 24 ಯುದ್ಧ ವಿಮಾನಗಳು ಭೂಸ್ಪರ್ಶ ತರಬೇತಿಯಲ್ಲಿ ಪಾಲ್ಗೊಂಡಿದ್ದು, ಯುದ್ಧ ಸಂದರ್ಭಗಳಲ್ಲಿ ಅಥವಾ ಇನ್ನಾವುದೇ ತುರ್ತು ಸಂದರ್ಭಗಳಲ್ಲಿ ಸೇನೆಯ ರನ್ ವೇ ಗಳು ಅಲಭ್ಯವಾದಾಗ ಹೈವೇಗಳು ಅನುಕೂಲಕ್ಕೆ ಬರುತ್ತವೆ ಎಂದು ಏರ್ ಮಾರ್ಷಲ್ ಎಸ್ ಬಿ ಡಿಯೋ ಅವರು ಹೇಳಿದ್ದಾರೆ. ಅಂತೆಯೇ ಇಂದಿನ ತರಬೇತಿ ಕಾರ್ಯದ ಕುರಿತು ಮಾಹಿತಿ ನೀಡಿದ ಅವರು, ಪ್ರಮುಖವಾಗಿ ಇಂದಿನ ತರಬೇತಿ ಕಾರ್ಯದಲ್ಲಿ ಅಮೆರಿಕದಿಂದ ತರಿಸಿಕೊಳ್ಳಲಾದ ಹರ್ಕ್ಯುಲಸ್ ಸಿ-130ಜೆ ಜಂಬೋ ಸರಕು ಸಾಗಣಾ ವಿಮಾನವನ್ನು ಭೂಸ್ಪರ್ಶ ಮತ್ತು ಟೇಕ್ ಆಫ್ ಮಾಡಲಾಗುತ್ತಿದೆ ಎಂದು ಹೇಳಿದರು.
ಅಂತೆಯೇ ಸೇನೆಗೆ ಸಂಬಂಧಿಸಿದಂತೆ ಇದು ಪ್ರಮುಖ ವಿಮಾನವಾಗಿದ್ದು, ಈ ಯುದ್ಧ ವಿಮಾನದಲ್ಲಿ ಒಟ್ಟು 200 ಸಿಬ್ಬಂದಿಗಳನ್ನು ಏಕಕಾಲದಲ್ಲಿ ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಸೇನೆಗೆ ಬೇಕಾದ ಅಗತ್ಯ ಸರಕುಗಳನ್ನು ರವಾನಿಸಬಹುದಾಗಿದೆ. ಅತ್ಯಂತ ಹೆಚ್ಚು ತೂಕವಿರುವ ಈ ಯುದ್ಧ ವಿಮಾನವನ್ನು ಹೈವೇಯಲ್ಲಿ ಭೂಸ್ಪರ್ಶ ಮಾಡುವುದು ಕಠಿಣ ಕೆಲಸವಾಗಿರುತ್ತದೆ ಎಂದು ಡಿಯೋ ಹೇಳಿದರು.
ಇನ್ನು ಇಂದಿನ ತರಬೇತಿಗಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಲಾಗಿತ್ತು. ಪ್ರಮುಖವಾಗಿ ಭದ್ರತೆಗಾಗಿ ಗರುಡಾ ಕಮಾಂಡೋ ಪಡೆಗಳನ್ನು ನಿಯೋಜಿಸಲಾಗಿತ್ತು. ನಿನ್ನೆ ಸಂಜೆಯಿಂದಲೇ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲಾಗಿತ್ತು ಎಂದು ಡಿಯೋ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos