ಇಂದೋರ್: 14 ವರ್ಷಗಳ ಕಾಲ ಪಾಕಿಸ್ತಾನದಲ್ಲಿದ್ದುಕೊಂಡು ಸಂಕಷ್ಟ ಎದುರಿಸಿ, ಕೊನೆಗೂ ತವರುನೆಲೆ ಭಾರತಕ್ಕೆ ಮರಳಿದ್ದ ಗೀತಾ ಪೋಷಕರು ಹುಡುಕಾಟ ತೀವ್ರಗೊಂಡಿದ್ದು, ಗೀತಾ ನಮ್ಮ ಪುತ್ರಿಯೇ ಎಂದು ಹೇಳಿಕೊಂಡು ಬಂದಿದ್ದ ಜಾರ್ಖಾಂಡ್ ದಂಪತಿಗಳನ್ನು ಗುರ್ತಿಸುವಲ್ಲಿ ಗೀತಾ ವಿಫಲಳಾಗಿದ್ದಾಳೆ.
ಕೆಲ ದಿನಗಳ ಹಿಂದಷ್ಟೇ ಜಾರ್ಖಾಂಡ್ ಮೂಲದ ಮಾಲಾ ದೇವಿ ಹಾಗೂ ವಿಜಯ್ ರಾಮ್ ಎಂಬ ದಂಪತಿಗಳು ಗೀತಾ ನಮ್ಮ ಪುತ್ರಿ ಎಂದು ಹೇಳಿದ್ದರು. ಇದರಂತೆ ನಿನ್ನೆ ದಂಪತಿಗಳು ಗೀತಾಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗೀತಾ ದಂಪತಿಗಳನ್ನು ಗುರ್ತಿಸುವಲ್ಲಿ ವಿಫಲಳಾಗಿದ್ದಾಳೆಂದು ತಿಳಿದುಬಂದಿದೆ.
ಸಂಜ್ಞಾ ಭಾಷೆ ತಜ್ಞ ಜ್ಞಾನೇಂದ್ರ ಪುರೋಹಿತ್ ಅವರು ಮಾತನಾಡಿ, ಗೀತಾಳನ್ನು ಭೇಟಿ ಮಾಡಲು ಬಂದಿದ್ದ ದಂಪತಿಗಳನ್ನು ಗೀತಾ ತನ್ನ ಪೋಷಕರಲ್ಲ ಎಂದು ಹೇಳಿದ್ದಳು ಎಂದು ಹೇಳಿದ್ದಾರೆ.
ಕಲೆಕ್ಟರ್ ನಿಶಾಂಗ್ ವಾರ್ವಡೆ ಮಾತನಾಡಿ, ಸಂಜ್ಞಾ ಭಾಷೆ ನನಗೆ ಗೊತ್ತಿಲ್ಲ. ಗೀತಾ ತನ್ನ ಕುಟುಂಬವನ್ನು ಗುರ್ತಿಸುತ್ತಿರುವ ಕುರಿತು ನನಗೆ ಅರ್ಥವಾಗಲಿಲ್ಲ. ಇದೀಗ ಡಿಎನ್ಎ ಪರೀಕ್ಷೆ ಮಾಡಲಾಗುತ್ತಿದ್ದು, ಪರೀಕ್ಷೆ ಬಳಿಕವಷ್ಟೇ ಉತ್ತರ ಸಿಗಲಿದೆ. ದೆಹಲಿ ಪ್ರಯೋಗಾಲದಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ವಾರದೊಳಗಾಗಿ ವರದಿ ಸಿಗಲಿದೆ ಎಂದು ತಿಳಿಸಿದ್ದಾರೆ.