ಸಿರ್ಸಾದ ಡೇರಾ ಸಚ್ಚಾ ಸೌದ ಆಶ್ರಮ
ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಾಬಾ ರಾಮ್ ರಹೀಮ್ ಗುರ್ಮೀತ್ ಸಿಂಗ್ ರ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾದ ಆಶ್ರಮವನ್ನು ಶೋಧಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ಅಲ್ಲದೇ ನಿವೃತ್ತ ನ್ಯಾಯಾಧೀಶ ಕೆಎಸ್ ಪವಾರ್ ಅವರನ್ನು ಕೋರ್ಟ್ ಕಮಿಷನರ್ ಆಗಿ ನೇಮಕ ಮಾಡಿ, ಅವರ ಮೇಲ್ವಿಚಾರಣೆಯಲ್ಲಿ ಶೋಧ ಕಾರ್ಯ ನಡೆಸುವಂತೆ ಸೂಚನೆ ನೀಡಿದೆ.
ಕೋರ್ಟ್ ಕಮಿಷನರ್ ನೇತೃತ್ವದಲ್ಲಿಯೇ ಡೇರಾ ಸಚ್ಚಾ ಸೌದವನ್ನು ಶೋಧಿಸುವುದು ಅಗತ್ಯವಾಗಿದೆ. ಬಳಿಕ ಕೆಎಸ್ ಪವಾರ್ ಅವರು ಹೈಕೋರ್ಟ್ ಗೆ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ.
ಹೈಕೋರ್ಟ್ ಆದೇಶದ ನಂತರ ಪೊಲೀಸರು ಸ್ವ್ಯಾಟ್ ಮತ್ತು ಬಾಂಬ್ ತಪಾಸಣಾ ತಂಡವನ್ನು ಸಿದ್ಧತೆ ಮಾಡಿಕೊಂಡು ಸಿರ್ಸಾ ಪ್ರಧಾನ ಆಶ್ರಮದೊಳಗೆ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಸೋಮವಾರ ಹರಿಯಾಣ ಪೊಲೀಸರು ಸಿರ್ಸಾದಲ್ಲಿರುವ ಡೇರಾ ಆಶ್ರಮದಲ್ಲಿ ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು.