ದೇಶ

ಭಾರತಕ್ಕೆ ಬರುವುದಕ್ಕೂ ಮುನ್ನ ನಿಮ್ಮ ದೇಶದಲ್ಲಿಯೇ ಗೋಮಾಂಸ ತಿಂದು ಬನ್ನಿ: ಪ್ರವಾಸೋದ್ಯಮ ನೂತನ ಸಚಿವ

Manjula VN
ನವದೆಹಲಿ: ಭಾರತಕ್ಕೆ ಬರುವುದಕ್ಕೂ ಮುನ್ನ ನಿಮ್ಮ ನಿಮ್ಮ ದೇಶಗಳಲ್ಲಿಯೇ ಗೋಮಾಂಸ ತಿಂದು ಬನ್ನಿ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ನೂತನ ಸಚಿವ ಕೆ.ಜೆ. ಅಲ್ಫಾನ್ಸ್ ಅವರು ಶುಕ್ರವಾರ ಹೇಳಿದ್ದಾರೆ.
ಭುವನೇಶ್ವರದಲ್ಲಿ ಇಂಡಿಯನ್ ಅಸೋಸಿಯೇಶನ್ ಆಫ್ ಟೂರ್ ಆಪರೇಟರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಕೆಲ ರಾಜ್ಯಗಳಲ್ಲಿ ಗೋಹತ್ಯೆ ಹಾಗೂ ಗೋಮಾಂಸ ಸೇವನೆಯನ್ನು ನಿಷೇಧ ಮಾಡಿರುವ ಹಿನ್ನಲೆಯಲ್ಲಿ ಭಾರತಕ್ಕೆ ಬರುವ ವಿದೇಶಿಗರಿಗೆ ನೀಡುವ ಆತಿಥ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಭಾರತಕ್ಕೆ ಬರುವ ವಿದೇಶಿಯರು ಭಾರತಕ್ಕೆ ಬರುವುದಕ್ಕೂ ಮುನ್ನ ಅವರ ದೇಶದಲ್ಲಿಯೇ ಗೋಮಾಂಸ ತಿಂದು ನಂತರ ಭಾರತಕ್ಕೆ ಬರಲಿ ಎಂದು ಹೇಳಿದ್ದಾರೆ.
ಭಾರತ ಅತ್ಯಂತ ಹಳೆಯ ನಾಗರೀಕತೆಯನ್ನು ಹೊಂದಿರುವ ದೇಶವಾಗಿದೆ. ಇಡೀ ವಿಶ್ವವೇ ಇಂದು ಭಾರತಕ್ಕೆ ಬಂದು ಭಾರತವನ್ನು ನೋಡುತ್ತಿದೆ. ನಮ್ಮ ಇತಿಹಾಸ ಹಾಗೂ ನಮ್ಮ ದೇಶವನ್ನು ನಾವು ಪ್ರೀತಿಸಬೇಕು. ಈ ಬಗ್ಗೆ ವಿದೇಶಿಯರಿಗೂ ಹೇಳಬೇಕು. ನಮ್ಮದು ಅತ್ಯಂತ ಸುಂದರವಾದ ದೇಶ ಎಂದು ತಿಳಿಸಬೇಕು ಎಂದು ತಿಳಿಸಿದ್ದಾರೆ. 
ಸೆ.3 ರಂದು ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರವಾಸೋದ್ಯಮ ಸಚಿವರಾಗಿ ಅಲ್ಫಾನ್ಸ್ ಅವರು ಆಯ್ಕೆಯಾಗಿದ್ದರು. ಬಳಿಕ ಪ್ರತಿಕ್ರಿಯೆ ನೀಡಿದ್ದ ಅವರು, ಭಾರತೀಯ ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸುವುದಕ್ಕೆ ಹಲವು ಕ್ರಿಯಾಶೀಲ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಗೆ ಸಂಬಂಧಿಸಿದಂತೆ ಜನರೂ ಸರ್ಕಾರಕ್ಕೆ ಸಲಹೆ ಹಾಗೂ ಸೂಚನೆಗಳನ್ನು ನೀಡಬಹುದು ಎಂದು ಹೇಳಿದ್ದರು. 
SCROLL FOR NEXT