ಚೆನ್ನೈ: ನಿರೀಕ್ಷೆಯಂತೆಯೇ ಎಐಎಡಿಎಂಕೆ ಪಕ್ಷದಿಂದ ವಿಕೆ ಶಶಿಕಲಾ ಹಾಗೂ ಟಿಟಿವಿ ದಿನಕರನ್ ಅವರನ್ನು ವಜಾ ಮಾಡಲಾಗಿದೆ.
ಚೆನ್ನೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಶಿಕಲಾ ಮತ್ತು ತಂಡವನ್ನು ಪಕ್ಷದಿಂದ ಹೊರಹಾಕುವ ನಿರ್ಧಾರಕ್ಕೆ ಪಕ್ಷದ ಎಲ್ಲ ಮುಖಂಡರೂ ಒಕ್ಕೋರಲಿನ ನಿರ್ಧಾರ ಕೈಗೊಂಡ ಹಿನ್ನಲೆಯಲ್ಲಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಶಶಿಕಲಾ ಹಾಗೂ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಆ ಮೂಲಕ ಈ ಹಿಂದೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಶಶಿಕಲಾ ಅವರನ್ನು ಅವರ ಸ್ಥಾನದಿಂದ ಕೆಳಗಿಳಸಲಾಗಿದ್ದು, ಟಿಟಿವಿ ದಿನಕರನ್ ರನ್ನು ಉಪ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲಾಗಿದೆ.
ತೀವ್ರ ಕುತೂಹಲೆ ಕೆರಳಿಸಿದ್ದ ಎಐಎಡಿಎಂಕೆ ಸಾಮಾನ್ಯ ಸಭೆಗೆ ತಡೆ ನೀಡುವಂತೆ ಈ ಹಿಂದೆ ಟಿಟಿವಿ ದಿನಕರನ್ ಬೆಂಬಲಿಗರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಮೂಲಕ ಸಾಮಾನ್ಯಸಭೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಅದರಂತೆ ಸಿಎಂ ಇ ಪಳನಿಸ್ವಾಮಿ ನೇತೃತ್ವದಲ್ಲಿ ಎಐಎಡಿಎಂಕೆ ಪಕ್ಷ ಸಾಮಾನ್ಯ ಸಭೆ ನಡೆದಿದೆ.
ಜೆ ಜಯಲಲಿತಾ ಅವರೇ ಪಕ್ಷದ ಶಾಶ್ವತ ಪ್ರಧಾನ ಕಾರ್ಯದರ್ಶಿ
ಇದೇ ವೇಳೆ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದ ಹಾಗೂ ಬಣರಾಜಕೀಯದಿಂದ ಬುದ್ಧಿಕಲಿತಂತಿರುವ ಎಐಎಡಿಎಂಕೆ ಪಕ್ಷ ದಿವಂಗತ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಈ ಹಿಂದಿನ ಪ್ರಧಾನ ಕಾರ್ಯದರ್ಶಿ ಜೆ ಜಯಲಲಿತಾ ಅವರನ್ನೇ ಎಐಎಡಿಎಂಕೆ ಪಕ್ಷದ ಶಾಶ್ವತ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಯೆ ಮಾಡಿದೆ. ಆ ಮೂಲಕ ಪಳನಿ ಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಒಗ್ಗೂಡಿ ಪಕ್ಷದ ಎರಡು ಎಲೆಗಳ ಚಿನ್ಹೆಯನ್ನು ಮರಳಿ ಪಡೆಯಲು ಮುಂದಾಗಿದ್ದಾರೆ.
ಅಂತೆಯೇ ಈ ಹಿಂದೆ ದಿವಂಗತ ಜೆ ಜಯಲಲಿತಾ ಅವರು ನೇಮಕ ಮಾಡಿದ್ದ ಪದಾಧಿಕಾರಿಗಳೇ ಇನ್ನು ಮುಂದೆಯೇ ಪಕ್ಷದ ಪ್ರಮುಖ ಸ್ಥಾನಗಳಲ್ಲಿ ಮುಂದುವರೆಸುವ ಕುರಿತೂ ನಿರ್ಧಾರ ಕೈಗೊಳ್ಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos