ನವದೆಹಲಿ: 2008ರ ಮುಂಬೈ ಉಗ್ರ ದಾಳಿ ಮತ್ತು ಪಠಾನ್ಕೋಟ್ ದಾಳಿಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಯೋತ್ಪಾದನೆ ಕುರಿತಂತೆ ಜಂಟಿ ಹೇಳಿಕೆ ನೀಡಿರುವ ಉಭಯ ನಾಯಕರು ಭಯೋತ್ಪಾದನೆ ವಿರುದ್ಧ ಕೆಂಡಾಕಾರಿದ್ದಾರೆ. ಇನ್ನು ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಭಾರತಕ್ಕೆ ಪ್ರಬಲ ಸಹಕಾರ ನೀಡಲು ಜಪಾನ್ ಮುಂದಾಗಿದೆ. ಅಂತೆ ಉಗ್ರ ಸಂಘಟನೆಗಳಾದ ಅಲ್ ಖೈದಾ, ಇಸಿಸ್ ಮತ್ತು ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಮತ್ತು ಲಷ್ಕರ್ ಇ ತೊಯ್ಬಾ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿದ್ದಾರೆ.
ಸದ್ಯ ಭಾರತ ಪ್ರವಾಸದಲ್ಲಿರುವ ಶಿಂಜೋ ಅಬೆ ಅವರು ಭಾರತದ ಪ್ರಪ್ರಥಮ ಬುಲೆಟ್ ರೈಲಿಗೆ ಚಾಲನೆ ನೀಡಿದರು. ನಂತರ ಉಭಯ ನಾಯಕರು 15 ಒಪ್ಪಂದಗಳಿಗೆ ಸಹಿ ಹಾಕಿದರು. ದ್ವಿಪಕ್ಷೀಯ ಒಪ್ಪಂದಗಳು ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ನವ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಭಾರತ ಮತ್ತು ಜಪಾನ್ ದೇಶಗಳ ನಡುವಿನ ಒಪ್ಪಂದಗಳನ್ನು ನಾನು ಸ್ವಾಗತಿಸುತ್ತೇನೆ. 2016-17ನೇ ಸಾಲಿನಲ್ಲಿ ಭಾರತದಲ್ಲಿ ಜಪಾನ್ 4.7 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಜಪಾನ್ ಹೂಡಿಕೆ ಪ್ರಮಾಣ ಶೇ.80ರಷ್ಟು ಏರಿಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.