ಭಾರತವನ್ನು ಉದ್ದೇಶಿಸಿ ಮಾತನಾಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ
ಅಹ್ಮದಾಬಾದ್: ಭಾರತದಂತಹ ರಾಷ್ಟ್ರದಲ್ಲಿ ಬುಲೆಟ್ ರೈಲು ನಿರ್ಮಿಸುವ ಸಾದಾವಕಾಶ ಜಪಾನ್ ಗೆ ಸಿಕ್ಕಿದ್ದರಿಂದ ನಾವು ಕೃತಜ್ಞರಾಗಿದ್ದೇವೆ ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಹೇಳಿದ್ದಾರೆ.
ಗುರುವಾರ ಅಹ್ಮದಾಬಾದ್ ಅಥ್ಲೆಟಿಕ್ಸ್ ಮೈದಾನದಲ್ಲಿ ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡಿದ ಬಳಿಕ ಭಾರತೀಯ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಭಾರತೀಯರಿಗೆ ನಮಸ್ಕಾರ ಹೇಳುವ ಮೂಲಕ ತಮ್ಮ ಭಾಷಣ ಆರಂಭಿಸಿದರು. "ನಮಸ್ಕಾರ, ಭಾರತದಲ್ಲಿ ಬುಲೆಟ್ ರೈಲು ನಿರ್ಮಾಣ ಮಾಡುವ ಅವಕಾಶ ಜಪಾನ್ ಗೆ ದೊರೆತಿರುವುದರಿಂದ ನಾವು ಕೃತಜ್ಞರಾಗಿದ್ದೇವೆ. ಇದೊಂದು ಐತಿಹಾಸಿಕ ದಿನವಾಗಿದ್ದು, ಭಾರತ ಮತ್ತು ಜಪಾನ್ ದೇಶಗಳ ನಡುವಿನ ಸ್ನೇಹದ ಮತ್ತೊಂದು ಪುಟ ಈ ಮೂಲಕ ಆರಂಭವಾಗಿದೆ. ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ಹಾಗೂ ನಾನು ಕನಲು ಕಂಡಿದ್ದೆವು. ಇದೀಗ ಈ ಕನಸು ನನಸಾಗುತ್ತಿದೆ".
ಜಪಾನ್ ನಲ್ಲಿ ಬುಲೆಟ್ ರೈಲು ಸಂಚಾರ ಆರಂಭವಾದ ಬಳಿಕ ಅಲ್ಲಿನ ಮೂಲಸೌಕರ್ಯಗಳಲ್ಲಿ ಅಮೂಲಾಗ್ರ ಬದಲಾವಣೆಯಾಗಿತ್ತು. ಅದೇ ಬದಲಾವಣೆಯನ್ನು ನಾವು ಭಾರತದಲ್ಲಿ ನಿರೀಕ್ಷೆ ಮಾಡುತ್ತಿದ್ದೇವೆ. ಜಪಾನ್ ನ ಸುಮಾರು 100 ಮಂದಿ ಬುಲೆಟ್ ರೈಲು ತಜ್ಞರು ಇನ್ನು ಮುಂದೆ ಭಾರತದಲ್ಲಿ ಕಾರ್ಯ ನಿರ್ವಹಿಸಲಿದ್ದು, ಯೋಜನೆ ಪೂರ್ಣವಾಗುವವರೆಗೂ ಇಲ್ಲಿಯೇ ಇದ್ದು ಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಇಂದು ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡಿದ ನಾನು ಮುಂದಿನ ಬಾರಿ ಭಾರತಕ್ಕೆ ಬರುವಾಗ ಬುಲೆಟ್ ರೈಲು ರೈಲಿಗೆ ಚಾಲನೆ ನೀಡಲು ಬರುತ್ತೇನೆ ಎಂದು ಅಬೆ ಹಾಸ್ಯಾತ್ಮಕವಾಗಿ ಹೇಳಿದರು. ಅಂತೆಯೇ ಜೈ ಜಪಾನ್ ಜೈ ಇಂಡಿಯಾ ಎಂದು ಹೇಳುವ ಮೂಲಕ ಅಬೆ ತಮ್ಮ ಬಾಷಣವನ್ನು ಮುಕ್ತಾಯಗೊಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos