ಚೆನ್ನೈ: ತಮಿಳುನಾಡು ಆಡಳಿತರೂಢ ಎಐಎಡಿಎಂಕೆಯ ಆಂತರಿಕ ಬಿಕ್ಕಟ್ಟು ಮುಂದುವರೆದಿದ್ದು, ಸೆಪ್ಟೆಂಬರ್ 20ರವರಗೆ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಸದಂತೆ ಗುರುವಾರ ಮದ್ರಾಸ್ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಿ ಎಂದು ಟಿಟಿವಿ ದಿನಕರನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಈ ಆದೇಶ ನೀಡಿದೆ.
ದಿನಕರನ್ ಬೆಂಬಲಿತ 19 ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಸ್ಪೀಕರ್ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದರಿಂದ ವಿಶ್ವಾಸಮತಕ್ಕೆ ತಡೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಮೂರ್ತಿ ಎಂ ದುರೈಸಾಮಿ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಪಳನಿಸ್ವಾಮಿ ಸರ್ಕಾರ ಕೆಳಗಿಳಿಸಲು ಕಾಯುತ್ತಿರುವ ಶಶಿಕಲಾ ಬಣದ ದಿನಕರನ್ ಮತ್ತು ಡಿಎಂಕೆಗೆ ಮುಖಭಂಗವಾಗಿದೆ.
ನಿನ್ನೆಯಷ್ಟೇ ಎಐಎಡಿಎಂಕೆ ಪಕ್ಷದಿಂದ ಟಿಟಿವಿ ದಿನಕರನ್ ಹಾಗೂ ಶಶಿಕಲಾರನ್ನು ಮುಖ್ಯಮಂಂತ್ರಿ ಪಳನಿಸ್ವಾಮಿ ಮತ್ತು ಒ ಪನ್ನೀರ್ ಸೆಲ್ವಂ ಒಟ್ಟಾಗಿ ವಜಾ ಮಾಡಿದ್ದರು. ಇದೀಗ ಹೈಕೋರ್ಟ್ ಈ ಆದೇಶ ನೀಡಿದ್ದು ಇಬ್ಬರಿಗೂ ಮತ್ತೆ ಹಿನ್ನಡೆಯಾಗಿದೆ.
ದಿನಕರನ್ ತಮ್ಮ ಬಳಿ 20 ಶಾಸಕರಿದ್ದು ಸರಕಾರ ಇಳಿಸುವಷ್ಟು ಸಂಖ್ಯಾ ಬಲ ಇದೆ ಎಂದು ಹೇಳಿದ್ದಾರೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 117 ಶಾಸಕರ ಬೆಂಬಲ ಅಗತ್ಯವಾಗಿದೆ. ಎಐಎಡಿಎಂಕೆ ಬಳಿ 134 ಶಾಸಕರಿದ್ದಾರೆ. ಆದರೆ ತಮ್ಮ ಬಳಿ 20 ಶಾಸಕರಿದ್ದಾರೆ ಎಂದು ಟಿಟಿವಿ ಹೇಳಿರುವುದರಿಂದ ಸರ್ಕಾರದ ಭವಿಷ್ಯ ಅತಂತ್ರವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos