ದೇಶ

ಏರ್'ಸೆಲ್-ಮ್ಯಾಕ್ಸಿಸ್ ಹಗರಣ: ನನ್ನನ್ನು ಪ್ರಶ್ನಿಸಿ, ನನ್ನ ಪುತ್ರನನ್ನಲ್ಲ- ಚಿದಂಬರಂ

Manjula VN
ನವದೆಹಲಿ: ಎರ್'ಸೆಲ್-ಮ್ಯಾಕ್ಸಿಸ್ ಹಗರಣ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಶುಕ್ರವಾರ ಆರೋಪಿಸಿದ್ದಾರೆ. 
ಎರ್'ಸೆಲ್-ಮ್ಯಾಕ್ಸಿಸ್ ಹಗರಣ ಸಂಬಂಧ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಹಗರಣ ಪ್ರಕರಣ ಸಂಬಂಧ ನನ್ನನ್ನು ವಿಚಾರಣೆಗೊಳಪಡಿಸಿ, ನನ್ನ ಪುತ್ರನನ್ನು ಅಲ್ಲ ಎಂದು ಹೇಳಿಕೊಂಡಿದ್ದಾರೆ. 
ಸಿಬಿಐ ಅಧಿಕಾರಿಗಳು ಇಲ್ಲಸಲ್ಲದ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಸಿಬಿಐಗೂ ಮುನ್ನವೇ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್ಐಪಿಬಿ) ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಈ ದಾಖಲೆಗಳು ಮಾನ್ಯತೆಯನ್ನು ಪಡೆದುಕೊಂಡಿದೆ. ಇದನ್ನು ನಾನೂ ಒಪ್ಪಿಕೊಂಡಿದ್ದೇನೆ. ಸಿಬಿಐ ಅಧಿಕಾರಿಗಳು ಈ ಬಗ್ಗೆ ನನ್ನನ್ನು ವಿಚಾರಣೆ ನಡೆಸಬೇಕೇ ವಿನಃ ನನ್ನ ಪುತ್ರನನ್ನು ಅಲ್ಲ ಎಂದು ತಿಳಿಸಿದ್ದಾರೆ.  
ಏರ್ ಸೆಲ್-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ನಿಮ್ಮ ಹಣಕಾಸು ದಾಖಲೆಗಳೊಂದಿಗೆ ವಾರದೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐಗೆ ಕಾರ್ತಿ ಚಿದಂಬರಂಗೆ ಈ ಹಿಂದೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. 
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಏರ್ ಸೆಲ್ -ಮ್ಯಾಕ್ಸಿಸ್ ಸಂಸ್ಥೆಗೆ ವಿದೇಶಿ ಹೂಡಿಕೆ ಪಡೆದುಕೊಳ್ಳಲು ಕಾನೂನುಬಾಹಿರವಾಗಿ ಅನುಮೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್‌ ಅವರನ್ನು ವಿಚಾರಣೆ ನಡೆಸಲು ಸಿಬಿಐ ನಿರ್ಧರಿಸಿತ್ತು.
SCROLL FOR NEXT