ಅಲಪುಳಾ: ಕೇರಳದ ಅಲಪುಳಾ ಜಿಲ್ಲೆಯ ಏಷ್ಯಾನೆಟ್ ನ್ಯೂಸ್ ಟಿವಿ ಕಚೇರಿ ಮೇಲೆ ಗುರುವಾರ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಟಿವಿ ಸಿಬ್ಬಂದಿಯ ಕಾರನ್ನು ಧ್ವಂಸಗೊಳಿಸಲಾಗಿದೆ.
ಇಂದು ಬೆಳಗಿನ ಜಾವ ಈ ದಾಳಿ ನಡೆದಿದ್ದು, ದುಷ್ಕರ್ಮಿಗಳು ಕಚೇರಿಯ ಕಿಟಕಿಗಳನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ.
ಈ ಸಂಬಂಧ ಅಲಪುಳಾ ಉತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ವಾಹಿನಿ ಇತ್ತೀಚಿಗೆ ಕೇರಳ ಸಾರಿಗೆ ಸಚಿವ ತಾಮಸ್ ಚಾಂಡಿ ಅವರ ವಿರುದ್ಧ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಈ ದಾಳಿ ನಡೆದಿದೆ ಎಂದು ಏಷ್ಯಾನೆಟ್ ಮೂಲಗಳ ತಿಳಿಸಿವೆ. ತಮ್ಮ ವಿರುದ್ಧದ ವರದಿಗೆ ಸಂಬಂಧಿಸಿದಂತೆ ಕೇರಳ ಸಚಿವರು ಈಗಾಗಲೇ ಸುದ್ದಿ ವಾಹಿನಿಯ ಸಂಪಾದಕರಿಗೆ, ಸುದ್ದಿ ಸಂಪಾದಕರಿಗೆ ಹಾಗೂ ವರದಿಗಾರರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ ಆ ವರದಿಯಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು 1 ಕೋಟಿ ರುಪಾಯಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.