ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಮಾಜಿ ಹಣಕಾಸು ಸಚಿವ ಚಿದಂಬರಂ ಅವರದ್ದು ಕಳ್ಳರ ಕುಟುಂಬವಾಗಿದ್ದು, ಚಿದಂಬರಂ ಅವರ ಇಡೀ ಕುಟುಂಬ ಶೀಘ್ರದಲ್ಲಿಯೇ ತಿಹಾರ್ ಜೈಲು ಪಾಲಾಗಲಿದೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಚಿದಂಬರಂ ಅವರ ಪುತ್ರ ಕಾರ್ತಿ ಮಹಾವಂಚಕ. ಕಾರ್ತಿಗೆ ಸರಿಯಾದ ಶಿಕ್ಷಣವಿಲ್ಲ, ಉದ್ಯೋಗವಿಲ್ಲ. ಆದರೂ ಅಷ್ಟೊಂದು ಸಂಪತ್ತು, ಆಸ್ತಿ ಹೇಗು ಬಂತು. ಎಲ್ಲವನ್ನು ವಂಚನೆಯಿಂದ ಸಂಪಾದನೆ ಮಾಡಿದ್ದಾಗಿದೆ. ಕಾರ್ತಿ ತಂದೆ ಚಿದಂಬರಂ ಅವರು ಅಕ್ರಮ ವ್ಯವಹಾರಗಳನ್ನು ಮಾಡುತ್ತಿದ್ದು, ಇದರಿಂದ ಮಗ ಹಣ ಗಳಿಸುತ್ತಿದ್ದಾನೆಂದು ಆರೋಪ ಮಾಡಿದ್ದಾರೆ.
ಚಿದಂಬರಂ ಅವರ ಪತ್ನಿ ನಳಿನಿ ಕೂಡ ಇದರಿಂದ ಹೊರತಾಗಿಲ್ಲ. ಶೀಘ್ರದಲ್ಲೇ ಚಿದಂಬರಂ ಕುಟುಂಬದ ಎಲ್ಲಾ ಅಕ್ರಮಗಳು ಬಯಲಿಗೆ ಬರಲಿದ್ದು, ಇಡೀ ಕುಟುಂಬವೇ ತಿಹಾರ್ ಜೈಲು ಪಾಲಾಗಲಿದೆ ಎಂದು ತಿಳಿಸಿದ್ದಾರೆ.
ಕಾರ್ತಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. 2007ರಲ್ಲಿ ಚಿದಂಬರಂ ಅವರು ವಿತ್ತ ಸಚಿವರಾಗಿದ್ದಾಗ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ ಒಡೆತನದ ಐಎನ್ಎಕ್ಸ್ ಮೀಡಿಯಾಗೆ ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯಿಂದ ಅನುಮತಿ ಪಡೆಯುವಲ್ಲಿ ಅಕ್ರಮ ಎಸಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಕಾರ್ತಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿತ್ತು.
ಈ ಸಂಬಂಧ ಕಾರ್ತಿ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಯಾಗಿತ್ತು. ವಿದೇಶಿ ಬ್ಯಾಂಕ್ ಗಳ ಖಾತೆಗಳನ್ನು ಕ್ಲೋಸ್ ಮಾಡಿ, ದೇಶ ಬಿಟ್ಟು ಹೊರಡದಂತೆ ಸುಪ್ರೀಂಕೋರ್ಟ್ ಈ ಹಿಂದೆ ಕಾರ್ತಿಯವರಿಗೆ ಸೂಚಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos