ದೇಶ

ರೊಹಿಂಗ್ಯಾ ಮುಸ್ಲಿಮರು ಅಕ್ರಮ ವಲಸಿಗರೇ ಹೊರತು ನಿರಾಶ್ರಿತರಲ್ಲ: ಸಿಎಂ ಯೋಗಿ ಆದಿತ್ಯನಾಥ್

Manjula VN
ಲಖನೌ: ರೊಹಿಂಗ್ಯಾಮುಸ್ಲಿಮರು ಅಕ್ರಮ ವಲಸಿಗರೇ ಹೊರತು ನಿರಾಶ್ರಿತರಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. 
ಗೋರಖ್ಪುರದಲ್ಲಿ ನಡೆದ ಕನ್ಯಾ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ರೊಹಿಂಗ್ಯಾ ವಿವಾದ ಕುರಿತಂತೆ ಈ ಹಿಂದೆಯೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ರೊಹಿಂಗ್ಯಾ ಮುಸ್ಲಿಮರು ಅಕ್ರಮ ವಲಸಿಗರೇ ಹೊರತು ನಿರಾಶ್ರಿತರಲ್ಲ ಎಂದು ಹೇಳಿತ್ತು. ಮ್ಯಾನ್ಮಾರ್ ನಲ್ಲಿ ಸಾಕಷ್ಟು ಮುಗ್ದ ಹಿಂದೂಗಳನ್ನು ಹತ್ಯೆ ಮಾಡಲಾಗುತ್ತಿದೆ. ರೊಹಿಂಗ್ಯಾರಿಗೆ ಉಗ್ರರ ನಂಟು ಇರುವುದಾಗಿಯೂ ಹೇಳಲಾಗುತ್ತಿದೆ. ರೊಹಿಂಗ್ಯಾ ಮುಸ್ಲಿಮರನ್ನು ನಿರಾಶ್ರಿತರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಪರಿಸ್ಥಿತಿ ಹೀಗಿರುವಾಗ ರೊಹಿಂಗ್ಯಾ ಮುಸ್ಲಿಮರ ಕುರಿತಂತೆ ದೇಶದಲ್ಲಿ ಕಾಳಜಿ ಹಾಗೂ ಸಹಾನುಭೂತಿಗಳು ವ್ಯಕ್ತವಾಗುತ್ತಿರುವುದನ್ನು ನೋಡಿದರೆ ಬೇಸರ ಹಾಗೂ ಆಕ್ರೋಶ ವ್ಯಕ್ತವಾಗುತ್ತದೆ. 
ಇದೇ ವೇಳೆ ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಪ್ರಕರಣ ಜನರ ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿತ್ತು. ನ್ಯಾಯಾಲಯದ ತೀರ್ಪು ಹೊರಬರುವವರೆಗೂ ಕಾಯಬೇಕು. ಅಯೋಧ್ಯೆ ಪವಿತ್ರ ನಗರವಾಗಿದ್ದು, ಸತಾತನ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಅಯೋಧ್ಯೆಯಲ್ಲಿ ಈ ಬಾರಿ ದೀಪಾವಳಿ ಹಬ್ಬವನ್ನು ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಹಬ್ಬದ ಆಚರಣೆ ಕಾರ್ಯಕ್ರಮಗಳ ಕುರಿತಂತೆ ಅಕ್ಟೋಬರ್ ಮೊದಲ ವಾರ ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT