ನವದೆಹಲಿ: ಎಎಪಿ ನಾಯಕ ಕುಮಾರ್ ವಿಶ್ವಾಸ್ ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಕ್ಷಮೆ ಯಾಚಿಸುವುದಿಲ್ಲ. ಪಕ್ಷದ ಸಹೋದ್ಯೋಗಿಗಳು ಬಿಜೆಪಿ ಮುಖಂಡರ ವಿರುದ್ಧದ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ ಹೊರತಾಗಿಯೂ ಕುಮಾರ್ ವಿಶ್ವಾಸ್ ಜೇಟ್ಲಿ ಕ್ಷಮೆ ಕೇಳುವುದಿಲ್ಲ ಎಂದು ಅವರ ಆಪ್ತ ಸಹಾಯಕರು ಹೇಳಿದ್ದಾರೆ.
ಜೇಟ್ಲಿ ನೇತೃತ್ವದ ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ದಲ್ಲಿ ಅಕ್ರಮ ನಡೆದಿದೆ ಎನ್ನುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಎಪಿ ಮುಖಂಡರಾದ ಸಂಜಯ್ ಸಿಂಗ್, ಅಶುತೋಷ್, ದೀಪಕ್ ಬಾಜಪೇಯಿ, ರಾಘವ್ ಚಧಾ ಅವರುಗಳು ಅರುಣ್ ಜೇಟ್ಲಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.
ಸುಮಾರು ಎರಡು ವರ್ಷಗಳ ಹಿಂದೆ ಬಿಜೆಪಿ ಮುಖಂಡರ ವಿರುದ್ಧ ನೀಡಿದ್ದ ಮಾನಹಾನಿಕಾರಕ ಹೇಳಿಕೆಗಳಿಗೆ ನಾವು ವಿಷಾದ ವ್ಯಕ್ತಪಡಿಸಿರುವುದಾಗಿ ಹೇಳಿರುವ ಕೇಜ್ರಿವಾಲ್ ಹಾಗೂ ಇತರೆ ಎಎಪಿ ಮುಖಂಡರ ಅರ್ಜಿಯ ವಿಚಾರಣೆ ಇಂದು ದೆಹಲಿ ನ್ಯಾಯಾಲಯದಲ್ಲಿ ನಡೆದಿದೆ.
ಕೇಜ್ರಿವಾಲ್ ಹಾಗೂ ಇತರೆ ನಾಯಕರು ತಾವು ಜೇಟ್ಲಿ ವಿರುದ್ಧ ಮಾಡಿದ್ದ ಟೀಕೆಗಳಿಗೆ ಕ್ಷಮೆ ಯಾಚಿಸಿದ್ದಾರೆ ಆದರೆ ಕುಮಾರ್ ವಿಶ್ವಾಸ್ ಈ ಸಂಬಂಧ ಯಾವ ಮನವಿಯನ್ನೂ ಸಲ್ಲಿಸದ ಕಾರಣ ಅವರ ವಿರುದ್ಧದ ಮಾನನಷ್ಟ ಮೊಕದ್ದಮೆ ಮುಂದುವರಿಯಲಿದೆ.
ಕುಮಾರ್ ವಿಶ್ವಾಸ್, ಜೇಟ್ಲಿ ಅವರ ಕ್ಷಮೆ ಯಾಚಿಸುವುದಿಲ್ಲ ಎಂದು ಅವರ ಸಹಾಯಕ ಪ್ರಭುದ್ ಕುಮಾರ್ ಹೇಳಿದ್ದಾರೆ. ಕಳೆದ ತಿಂಗಳಿನಲ್ಲಿ ತನ್ನ ರಾಜಕೀಯ ವಿರೋಧಿಗಳ ಕುರಿತು ಮಾಡಿದ ಟೀಕೆಗಳಿಗೆ ಕೇಜ್ರಿವಾಲ್ ಕ್ಷಮಾಪಣೆ ಕೇಳಲಾರಂಭಿಸಿದ ಬಳಿಕ ಸಹ ವಿಶ್ವಾಸ್, ತಮ್ಮ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆಯನ್ನು ಎದುರಿಸುವುದಾಗಿ ಹೇಳಿದ್ದಾರೆ.