ನವದೆಹಲಿ: ದೇಶವು ತನ್ನ ಮಹಿಳೆಯ ಮೇಲಾಗುವ ಅನಾಚಾರವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಕಥುವಾ ಹಾಗು ಉನ್ನಾವೊ ಅತ್ಯಾಚಾರ ಪ್ರಕರಣ ವಿರೋಧಿಸಿ ತಾವು ಮಧ್ಯರಾತ್ರಿ ವೇಳೆ ಇಂಡಿಯಾ ಗೇಟ್ ಬಳಿ ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಪ್ರತಿಭಟನೆಯಲ್ಲಿ ದೆಹಲಿಯ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಜತೆಯಾಗಲಿದ್ದಾರೆ.
"ಲಕ್ಷಾಂತರ ಭಾರತೀಯರಂತೆಯೇ ನನ್ನ ಹೃದಯ ಸಹ ಈ ರಾತ್ರಿ ಮರುಗುತ್ತದೆ. ಭಾರತವು ತನ್ನ ಮಹಿಳೆಯರ ಮೇಲಾಗುತ್ತಿರುವ ಅನಾಚಾರಗಳನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ.
"ಹಿಂಸಾಚಾರವನ್ನು ಪ್ರತಿಭಟಿಸಲು, ನ್ಯಾಯಕ್ಕಾಗಿ ಒತ್ತಾಯಿಸಲು ಈ ದಿನ ಮಧ್ಯರಾತ್ರಿ ಇಂಡಿಯಾ ಗೇಟ್ ಬಳಿ ಮೌನ, ಶಾಂತಿಯುತ ಮೇಣದಬತ್ತಿ ಪ್ರತಿಭಟನೆಯಲ್ಲಿ ನನ್ನನ್ನು ಕೂಡಿಕೊಳ್ಳಿ" ರಾಹುಲ್ ಟ್ವೀಟ್ ಮಾಡಿದ್ದಾರೆ.
ಈ ಮಧ್ಯರಾತ್ರಿ 12 ಗಂಟೆಗೆ ಡಿಪಿಸಿಸಿ ಕಚೇರಿಯಿಂದ ಇಂಡಿಯಾ ಗೇಟ್ ವರೆಗೆ ಶಾಂತಿಯುತ ಮೇಣದಬತ್ತಿ ಹಿಡಿದು ಮೆರವಣಿಗೆ ನಡೆಸಲಾಗುವುದು ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಾಕೆನ್ ಹೇಳಿದ್ದಾರೆ.
ಇದಕ್ಕೂ ಮುನ್ನ ಜಮ್ಮು ಕಾಶ್ಮೀರದ ಕಥುವಾ ದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿ ರಾಹುಲ್ ತೀವ್ರ ಆಘಾತ ವ್ಯಕ್ತಪಡಿಸಿದ್ದರು.