ನವದೆಹಲಿ: ಪಂಜಾಬ್ ಸ್ಥಳೀಯಾಡಳಿತ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ನವಜೋತ್ ಸಿಂಗ್ ಸಿಧು ಅವರನ್ನು 1988ರ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸುವಂತೆ ಪಂಜಾಬ್ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.
ಪ್ರಕರಣದ ವಿಚಾರಣೆಗೆ ಪಂಜಾಬ್ ಸರ್ಕಾರದ ಪರವಾಗಿ ಹಾಜರಾದ ವಕೀಲರು, ಕೊಲೆ ಪ್ರಕರಣದಲ್ಲಿ ತಾವು ಭಾಗಿಯಾಗಿಲ್ಲ ಎಂಬ ಸಿಧು ಹೇಳಿಕೆ ಸುಳ್ಳು ಎಂದು ವಾದಿಸಿದ್ದಾರೆ.
ಡಿಸೆಂಬರ್ 27, 1988ರಲ್ಲಿ ಪಟಿಯಾಲಾದ ರಸ್ತೆಯೊಂದರಲ್ಲಿ ಸಿಧು ತಮ್ಮ ಮಿತ್ರನ ಜತೆಯಲ್ಲಿ ವಾಹನದಲ್ಲಿ ಸಾಗುತ್ತಿದ್ದಾಗ 65 ವರ್ಷದ ಗುರ್ನಾಮ್ ಸಿಂಗ್ ಅವರ ಜತೆಗೆ ಮಾತಿನ ಚಕಮಕಿ ನಡೆದಿತ್ತು. ಆಗ ಇನ್ನೂ 25ರ ಹರೆಯದಲ್ಲಿದ್ದ ಸಿಧು ಹಾಗೂ ಅವರ ಮಿತ್ರ ಈ ಹಿರಿಯರ ಮೇಲೆ ಹಲ್ಲೆ ನಡೆಸಿದ್ದರಿಂದ ಆತ ಗಾಯಗೊಂಡು ಅಸುನೀಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಪಟಿಯಾಲಾದ ಸೆಷನ್ಸ್ ಕೋರ್ಟ್, 1991ರಲ್ಲಿ ಸಿಧು ಅವರನ್ನು ದೋಷಮುಕ್ತಗೊಳಿಸಿತ್ತು. ಆದರೆ 2006ರಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟು ಈ ತೀರ್ಪಿನ ವಿರುದ್ಧ ತೀರ್ಪು ನೀಡಿ ಸಿಧು ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಿಧು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ 2007ರಲ್ಲಿ ಹೈಕೋರ್ಟಿನ ತೀರ್ಪಿಗೆ ತಡೆಯಾಜ್ಞೆ ನೀಡಿದೆ.
ಈ ಮಧ್ಯೆ ಹೈಕೋರ್ಟ್ ತೀರ್ಪು ಅನ್ನು ಎತ್ತಿ ಹಿಡಿಯಬೇಕು ಎಂದು ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್ ಮನವಿ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos