ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳ ಬೆಂಬಲಕ್ಕೆ ನಿಂತಿದ್ದ ಇಬ್ಬರು ಬಿಜೆಪಿ ಸಚಿವರು ರಾಜೀನಾಮೆ ನೀಡಿದ್ದಾರೆ.
ಸಚಿವರ ರಾಜೀನಾಮೆಗೆ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಪಕ್ಷ ರಾಜೀನಾಮೆ ನೀಡುವಂತೆ ಸೂಚನೆ ನೀಡಿತ್ತು. ಸಚಿವರ ರಾಜೀನಾಮೆ ಹಾಗೂ ಅದರಿಂದ ಬಿಜೆಪಿ-ಪಿಡಿಪಿ ಮೈತ್ರಿಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ.
ಮಾರ್ಚ್ ತಿಂಗಳಲ್ಲಿ ನಡೆದ ಹಿಂದೂ ಏಕ್ತಾ ಮಂಚ್ ಆಯೋಜಿಸಿದ್ದ ರ್ಯಾಲಿಯಲ್ಲಿ ಕೈಗಾರಿಕಾ ಸಚಿವ ಚಂದ್ರ ಪ್ರಕಾಶ್ ಗಂಗಾ ಹಾಗೂ ಅರಣ್ಯ ಸಚಿವ ಲಾಲ್ ಸಿಂಗ್ ಅತ್ಯಾಚಾರ ಪ್ರಕರಣದ ಆರೋಪಿಗಳ ಪರವಾಗಿ ಮಾತನಾಡಿದ್ದರು. ಅತ್ಯಾಚಾರದ ಪ್ರಕರಣದ ಆರೋಪಿಗಳ ಬಂಧನವನ್ನು ಚಂದ್ರ ಪ್ರಕಾಶ್ ಗಂಗಾ ಜಂಗಲ್ ರಾಜ್ ಎಂದು ಹೇಳಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದೆ ಬಂಧನ ಮಾಡಬಾರದು ಎಂದು ಪೊಲೀಸರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಇನ್ನು ಲಾಲ್ ಸಿಂಗ್ ನಿರ್ಬಂಧ ಹೇರಿದ್ದ ಆದೇಶವನ್ನು ಮೀರಿ ಪ್ರತಿಭಟನೆ ಮಾಡಿ ಇಲ್ಲವೇ ಮನೆಯಲ್ಲಿ ಕುಳಿತುಕೊಳ್ಳಿ ಎಂದು ಜನರಿಗೆ ಕರೆ ನೀಡಿದ್ದರು.