ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ವಿಪಕ್ಷಗಳು ಮಹಾಭಿಯೋಗ ಮಂಡನೆಗೆ ಮುಂದಾಗಿದ್ದು, ವಿಶೇಷವೆಂದರೆ ಈ ಮಹಾಭಿಯೋಗಕ್ಕೆ ಮಾಜಿ ಪ್ರಧಾನಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಡಾ.ಮನಮೋಹನ್ ಸಿಂಗ್ ಅವರು ಸಹಿ ಹಾಕಿಲ್ಲ ಎಂದು ತಿಳಿದುಬಂದಿದೆ.
ತಮ್ಮದೇ ಕಾಂಗ್ರೆಸ್ ಪಕ್ಷ ಸೇರಿದಂತೆ ಒಟ್ಟು 7 ವಿರೋಧ ಪಕ್ಷಗಳು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ನಿಳುವಳಿ ಮಂಡಿಸಿ ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರಿಗೆ ಮನವಿ ಸಲ್ಲಿಸಿದೆ. ಒಟ್ಟು 64 ಮಂದಿ ಸಂಸದರು ಈ ನಿಳುವಳಿಗೆ ಸಹಿ ಹಾಕಿದ್ದಾರೆ. ಆದರೆ ಈ ನಿಲುವಳಿಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಸಹಿ ಹಾಕಿಲ್ಲ. ಡಾ. ಸಿಂಗ್ ಮಾತ್ರರಲ್ಲದೇ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಹಾಗೂ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಅವರೂ ಕೂಡ ಸಹಿ ಹಾಕಿಲ್ಲ ಎನ್ನಲಾಗಿದೆ.
ಈ ವಿಚಾರ ರಾಷ್ಟ್ರ ರಾಜಕೀಯದಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿರುವಂತೆಯೇ ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅವರು. ಡಾ. ಸಿಂಗ್ ಮಾಜಿ ಪ್ರಧಾನಿಯಾಗಿರುವುದರಿಂದ ಅವರ ಸಹಿ ಹಾಕಿಲ್ಲ. ಅಲ್ಲದೇ ಪ್ರಕರಣಗಳನ್ನು ಎದುರಿಸುತ್ತಿರುವವರು ಕೂಡ ಸಹಿ ಹಾಕುವಂತಿಲ್ಲ. ಹೀಗಾಗಿ ಚಿದಂಬರಂ, ಅಭಿಷೇಕ್ ಮನು ಸಿಂಗ್ವಿ ಅವರು ಕೂಡ ಹಾಕಿಲ್ಲ ಎಂದು ಸ್ಪಷ್ಟ ಪಡಿಸಿದ್ಧಾರೆ.
ಸಿಜೆಐ ವಿರುದ್ಧ ಮಹಾಭಿಯೋಗ ನಿಳುವಳಿಗೆ ಕಾಂಗ್ರೆಸ್, ಎನ್ಸಿಪಿ, ಸಿಪಿಐ, ಸಿಪಿಎಂ, ಎಸ್ಪಿ, ಬಿಎಸ್ಪಿ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಸಂಸದರು ಸಹಿ ಹಾಕಿದ್ಧಾರೆ. ಮಹಾಭಿಯೋಗ ನಿಳುವಳಿ ಮನವಿ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ ನಡೆದ ಸಭೆಯಲ್ಲಿ ಕಪಿಲ್ ಸಿಬಲ್, ಗುಲಾಂ ನಬಿ ಅಜಾದ್, ರಂದೀಪ್ ಸಿಂಗ್ ಸುರ್ಜೇವಾಲ, ಸಿಪಿಐನ ಡಿ. ರಾಜ ಎನ್ಸಿಪಿಯ ವಂದನಾ ಚೌಹಾಣ್ ಸಹಿತ ಹಲವು ಮಂದಿ ನಾಯಕರು ಭಾಗವಹಿಸಿದ್ದರು. ಮಹಾಭಿಯೋಗ ನಿಲುವಳಿ ಮಂಡನೆಗೆ ರಾಜ್ಯಸಭೆಯ ಐವತ್ತು ಸಂಸದರು ಹಾಗೂ ಲೋಕಸಭೆಯ ನೂರು ಮಂದಿ ಸಂಸದರು ಬೆಂಬಲ ಸೂಚಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos