ದೇಶ

ಪ.ಬಂಗಾಳ ಪಂಚಾಯತ್ ಚುನಾವಣೆ: ಹೊಸ ದಿನಾಂಕ ನಿಗದಿಗೆ ಆಯೋಗಕ್ಕೆ ಕೋಲ್ಕತ್ತಾ ಹೈಕೋರ್ಟ್ ಸೂಚನೆ

Sumana Upadhyaya

ಕೋಲ್ಕತ್ತಾ: ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸೇರಿದಂತೆ ಚುನಾವಣೆಯ ಇಡೀ ಪ್ರಕ್ರಿಯೆಯನ್ನು ಹೊಸದಾಗಿ ಆರಂಭಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಶುಕ್ರವಾರ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.

ನಾಮನಿರ್ದೇಶನ ದಿನಾಂಕದ ವಿಸ್ತರಣೆಯ ಏಪ್ರಿಲ್ 10ರ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ಸುಬ್ರತಾ ತಾಲುಕ್ಟರ್, ತಮ್ಮ 35 ಪುಟಗಳ ಆದೇಶದಲ್ಲಿ  ಪಶ್ಚಿಮ ಬಂಗಾಳ ಚುನಾವಣಾ ಕಾಯ್ದೆ 2003ರ ಸೆಕ್ಷನ್ 42ರ ಪ್ರಕಾರ, ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕವನ್ನು ಮರುಘೋಷಣೆ ಮಾಡಬೇಕಾಗಿದೆ. ಈ ಕಾಯ್ದೆ ಪ್ರಕಾರ ನಾಮಪತ್ರ ಸಲ್ಲಿಕೆ ಮತ್ತು ಚುನಾವಣೆಯ ಮೊದಲ ದಿನಾಂಕಕ್ಕೆ 21 ದಿನಗಳ ಅಂತರವಿರಬೇಕಾಗುತ್ತದೆ.

ಚುನಾವಣೆಗೆ ಬೇಕಾದ ಸಕಲ ಸಿದ್ಧತೆ ಮಾಡಬೇಕಾಗಿರುವುದರಿಂದ ಚುನಾವಣೆ ದಿನಾಂಕವನ್ನು ನಿರ್ಧರಿಸುವ ಹಕ್ಕು ತಮಗಿದೆ ಎಂದು ರಾಜ್ಯ ಸರ್ಕಾರ ಸಮರ್ಥನೆ ಮಾಡಿದರೂ ಕೂಡ  ಸರ್ಕಾರದ ಪ್ರತಿಪಾದನೆಯನ್ನು ತಿರಸ್ಕರಿಸಿರುವ ಕಲ್ಕತ್ತಾ ಹೈಕೋರ್ಟ್ ರಂಜಾನ್ ಅಥವಾ ಮಾನ್ಸೂನ್ ಸಂದರ್ಭದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ಹಿಂದಿನ ಆದೇಶದಂತೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಏಪ್ರಿಲ್ 9ಕ್ಕೆ ಮುಕ್ತಾಯವಾಗಿದ್ದು, ಚುನಾವಣೆಯನ್ನು ಮೇ 1,3 ಮತ್ತು 5ರಂದು ನಡೆಸಲು ನಿಗದಿಯಾಗಿತ್ತು.
ಆದರೆ ರಾಜ್ಯ ಚುನಾವಣಾ ಆಯೋಗ ವಕ್ತಾರ ಅಮರೇಂದರ್ ಕುಮಾರ್ ಸಿಂಗ್ ಅವರನ್ನು ಸ್ಥಾನದಿಂದ ವಜಾಗೊಳಿಸಬೇಕೆಂದು ಮತ್ತು ಕೇಂದ್ರ ಪಡೆಗಳ ಸಮ್ಮುಖದಲ್ಲಿ ಚುನಾವಣೆ ನಡೆಸಬೇಕೆಂದು ಪ್ರತಿಪಕ್ಷಗಳು ಮಾಡಿರುವ ಒತ್ತಾಯವನ್ನು ನ್ಯಾಯಾಲಯ ಮನ್ನಿಸಿಲ್ಲ.
ನ್ಯಾಯಾಲಯದ ಆದೇಶವನ್ನು ವಿರೋಧಪಕ್ಷಗಳು ನೈತಿಕ ಗೆಲುವು ಎಂದು ಸ್ವಾಗತಿಸಿವೆ.

ಇದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗೆ ನೈತಿಕ ಸೋಲಾಗಿದ್ದು ರಾಜ್ಯ ಚುನಾವಣಾ ಆಯೋಗದ ಅಸಮರ್ಥತೆಯನ್ನು ತೋರಿಸಿದೆ ಎಂದು ಟೀಕಿಸಿದೆ.

SCROLL FOR NEXT