ಹೈದರಾಬಾದ್ ನಲ್ಲಿ ಎಂಎಎ ಸದಸ್ಯರೊಂದಿಗೆ ಮಾತನಾಡುತ್ತಿರುವ ನಟ ಪವನ್ ಕಲ್ಯಾಣ್
ಹೈದರಾಬಾದ್: ಜನ ಸೇನಾ ಮುಖ್ಯಸ್ಥ ಹಾಗೂ ನಟ ಪವನ್ ಕಲ್ಯಾಣ್ ಅಭಿಮಾನಿಗಳು ಮಾಧ್ಯಮಗಳ ಮೇಲೆ ದಾಂಧಲೆ ನಡೆಸಿದ್ದು, ಮಾಧ್ಯಮವೊಂದರಲ ಒಬಿ ವ್ಯಾನ್ ಮೇಲೆ ದಾಳಿ ನಡೆಸಿರುವ ಘಟನೆ ಹೈದರಾಬಾದ್ ನಲ್ಲಿ ಶುಕ್ರವಾರ ನಡೆದಿದೆ.
ಮಾಧ್ಯಮಗಳ ತಮ್ಮ ತಾಯಿಯ ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಈ ಹಿಂದೆ ಪವನ್ ಕಲ್ಯಾಣ್ ಅವರು ಆರೋಪ ಮಾಡಿದ್ದರು.
ಶ್ರೀ ರೆಡ್ಡಿಯವರು 70 ವರ್ಷದ ನನ್ನ ತಾಯಿಯನ್ನು ನಿಂದಿಸಿದ್ದು, ಇದರ ವರದಿಗಳನ್ನು ಕೆಲ ಮಾಧ್ಯಮಗಳು ಸುದ್ದಿ ಮಾಡಿವೆ. ಇದರ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರ ಎನ್ ಲೋಕೇಶ್ ಅವರಿದ್ದಾರೆಂದು ಹೇಳಿದ್ದರು.
ಈ ಹಿನ್ನಲೆಯಲ್ಲಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮಾಧ್ಯಮಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ವೇಳೆ ಹಲವು ಮಾಧ್ಯಮಗಳ ವಿರುದ್ಧ ಘೋಷಣಾ ವಾಕ್ಯಗಳನ್ನು ಕೂಗಿದ್ದಾರೆ. ಅಲ್ಲದೆ, ಮಾಧ್ಯಮವೊಂದರ ಒಬಿ ವ್ಯಾನ್ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ಪವನ್ ಕಲ್ಯಾಣ್ ಅವರು ಹೇಳಿಕೆ ನೀಡುತ್ತಿದ್ದಂತೆಯೇ ಕೆಲ ಮಾಧ್ಯಮಗಳ ಕಚೇರಿ ಬಳಿ ತೆರಳಿರುವ ಪವನ್ ಕಲ್ಯಾಣ್ ಅಭಿಮಾನಿಗಳು ಏಕಾಏಕಿ ಕಲ್ಲು ತೂರಟ ನಡೆಸಿವೆ. ಅಲ್ಲದೆ, ಕಚೇರಿ ಮುಂದೆ ನಿಂತಿದ್ದ ಒಬಿ ವ್ಯಾನ್ ಗಳ ಮೇಲೂ ಕಲ್ಲೂ ತೂರಾಟ ನಡೆಸಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪವನ್ ಕಲ್ಯಾಣ್ ಅವರು, ಸುದ್ದಿ ಪ್ರಕಟಿಸಿದ್ದ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಹಿಂಸಾಚಾರಗಳಲ್ಲಿ ತೊಡಗಿಕೊಳ್ಳದಂತೆ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇದೇ ವೇಳೆ ಹೇಳಿಕೆ ನೀಡಿರುವ ಸಚಿವ ತಲಸನಿ ಶ್ರೀನಿವಾಸ್ ಅವರು, ಶೀಘ್ರದಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತೆಲುಗು ಚಿತ್ರರಂಗ ಕುರಿತ ಹಲವು ವಿಚಾರಗಳ ಸಂಬಂಧ ಚರ್ಚೆ ನಡೆಸುತ್ತೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos