ಚಂಡೀಘಡ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ವಾಗ್ದಂಡನೆ ವಿಧಿಸಲು ಸಲ್ಲಿಕೆಯಾಗಿರುವ ನಿಲುವಳಿ ಸೂಚನೆ ರಾಜಕೀಯ ಪ್ರೇರಿತವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ಹೇಳಿದ್ದಾರೆ.
ಇದೊಂದು ದುರದೃಷ್ಟಕರ ಹಾಗೂ ರಾಜಕೀಯ ಪ್ರೇರಿತ ಸಂಗತಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಬೆದರಿಸುವ ಪ್ರಯತ್ನವಾಗಿದೆ. ಒಂದು ವೇಳೆ ತಮ್ಮಿಷ್ಟಕ್ಕೆ ತಕ್ಕಂತೆ ಪ್ರಕರಣ ನಿರ್ಧರಿಸದಿದ್ದರೆ, ನ್ಯಾಯಾಧೀಶರ ಪಾತ್ರವನ್ನು ಹತ್ಯೆ ಮಾಡುವಂತಹ ಸಂದೇಶ ಇದರಿಂದ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸಂವಿಧಾನದ 124 (4) ವಿಧಿಯ ಅನ್ವಯ ಮಹಾಭೀಯೋಗದ ಮೂಲಕ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರನ್ನು ತೆರವುಗೊಳಿಸುವಂತೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿನ ಕೆಲ ವಿಪಕ್ಷಗಳು ನಿಲುವಳಿ ಸೂಚನೆ ಮಂಡಿಸಿದ್ದವು. ಈ ಸೂಚನೆಗೆ ಮೇಲ್ಮನೆಯಲ್ಲಿನ 64 ಸದಸ್ಯರು ಸಹಿ ಹಾಕಿದ್ದಾರೆ.
ಸಂವಿಧಾನದ 124 (4) ರ ಪ್ರಕಾರ, ಅನುಚಿತ ವರ್ತನೆ ಅಥವಾ ಅಸಾಮರ್ಥ್ಯ ಆಧಾರದ ಮೇಲೆ ಸಂಸತ್ತಿನ ಉಭಯ ಸದನಗಳಲ್ಲಿ ಮಹಾಭೀಯೋಗ ನಿಲುವಳಿ ಸೂಚನೆ ಮಂಡಿಸಿ ಅದಕ್ಕೆ ಮೂರನೇ ಎರಡನೇ ಬಹುಮತ ಅಗತ್ಯವಾಗಿರುತ್ತದೆ, ತದನಂತರ ರಾಷ್ಟ್ರಪತಿಗಳಿಂದ ಅದು ಅನುಮೋದನೆಯಾಗಬೇಕಾಗುತ್ತದೆ. ಇಲ್ಲದೆ ಹೋದರೆ ಸಿಜಿಐ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಲು ಸಾಧ್ಯವಿರುವುದಿಲ್ಲ.