ನವದೆಹಲಿ: ಚೀನಾದ ವುಹಾನ್ ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಎರಡು ದಿನಗಳ ಶೃಂಗಸಭೆ ತೆರಳುತ್ತಿರುವ ಪ್ರಧಾನಿ ಮೋದಿ, ಭಾರತ-ಚೀನಾ ಸಂಬಂಧವನ್ನುಕಾರ್ಯತಂತ್ರ ದೃಷ್ಟಿಕೋನದಲ್ಲಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.
ಚೀನಾದ ವುಹಾನ್ ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಎರಡು ದಿನಗಳ ಶೃಂಗಸಭೆ ಆರಂಭವಾಗುತ್ತಿದ್ದು, ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪಾಲ್ಗೊಳ್ಳಲ್ಲಿದ್ದಾರೆ. ಪ್ರಮುಖವಾಗಿ ಈ ಶೃಂಗಸಭೆಯಲ್ಲಿ ಭಾರತ-ಚೀನಾ ಶೀತಲ ಸಮರಕ್ಕೆ ಕಾರಣವಾಗಿರುವ ಡೊಕ್ಲಾಂ ವಿವಾದ ಚರ್ಚೆಯ ಕೇಂದ್ರ ವಿಷಯವಾಗಿರಲಿದ್ದು, ಇದೇ ವಿಚಾರವಾಗಿ ಮಾತನಾಡಿದ ಪ್ರಧಾನಿ ಮೋದಿ, ನಾನು ಮತ್ತು ಕ್ಸಿ ಜಿನ್ ಪಿಂಗ್ ಇಂಡೋ-ಚೀನಾ ಸಂಬಂಧವನ್ನು ಕಾರ್ಯತಂತ್ರ ಮತ್ತು ದೀರ್ಘಕಾಲದ ದೃಷ್ಟಿಕೋನದಲ್ಲಿ ಪರಿಶೀಲನೆ ಮಾಡುವುದಾಗಿ ಹೇಳಿದ್ದು, ಆ ಮೂಲಕ ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ಸುಧಾರಿಸಲು ಮತ್ತು ನಂಬಿಕೆಯನ್ನು ಪುನರ್ನಿರ್ಮಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ಶೃಂಗಸಭೆ ನಿಮಿತ್ತ ಚೀನಾಗೆ ತೆರಳುತ್ತಿರುವ ಪ್ರಧಾನಿ ಮೋದಿ, ಚೀನಾಗೆ ತೆರಳುವುದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದರು. 'ಕ್ಸಿ ಜಿನ್ ಪಿಂಗ್ ಅವರು, ರಕ್ಷಣೆ, ಮೂಲಸೌಕರ್ಯ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಂತೆಯೇ ಜಾಗತಿಕ ಸಮಸ್ಯೆಗಳು, ರಾಷ್ಟ್ರೀಯ ಅಭಿವೃದ್ಧಿ ಕುರಿತಂತೆ ನಮ್ಮ ದೃಷ್ಟಿಕೋನ ಮತ್ತು ಆದ್ಯತೆಗಳನ್ನು ಪರಸ್ಪರ ಹಂಚಿಕೆ ಮಾಡಿಕೊಳ್ಳಲ್ಲಿದ್ದು, ಪ್ರಮುಖವಾಗಿ ಪ್ರಸ್ತುತ ಮತ್ತು ಭವಿಷ್ಯದ ಅಂತಾರಾಷ್ಟ್ರೀಯ ಪರಿಸ್ಥಿತಿಗಳ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.
ಅತ್ತ ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೀನಾ ವಿದೇಶಾಂಗ ಇಲಾಖೆಯ ಉಪ ಸಚಿವ ಕಾಂಗ್ ಕ್ಸುವಾನ್ಯು ಅವರು, ನಾಳೆಯಿಂದ ಆರಂಭವಾಗಲಿರುವ ಶೃಂಗಸಭೆಯಲ್ಲಿ ಭಾರತ ಪ್ರಧಾನಿ ಮೋದಿ, ಜೀನಾ ಅಧ್ಯಕ್ಷ ಜಿನ್ ಪಿಂಗ್ ಪಾಲ್ಗೊಳ್ಳಲ್ಲಿದ್ದಾರೆ. ಉಭಯ ನಾಯಕರು, ಎರಡೂ ದೇಶಗಳ ನಡುವೆ ಇರುವ ಗಂಭೀರ ವಿಚಾರಗಳ ಕುರಿತು ಚರ್ಚೆ ನಡೆಸಿ ಇತ್ಯರ್ಥ ಪಡಿಸುವ ಪ್ರಯತ್ನ ಮಾಡಲಿದ್ದಾರೆ. ಅಂತೆಯೇ ಪರಸ್ಪರ ನಂಬಿಕೆ, ಸೌಹರ್ಧತೆ ಹೆಚ್ಚಳಕ್ಕೆ ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.