ನವದೆಹಲಿ: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ ಸಿ) ವಿಚಾರದಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಗುರುವಾರ ಕಾಂಗ್ರೆಸ್ ಆರೋಪಿಸಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕೇವಲ ಸ್ಥಳೀಯ ಸಮುದಾಯದಿಂದ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಅಬ್ಬರದ ಕೂಗಾಟ ನಡೆಸುತ್ತಿದ್ದಾರೆ. ಆದರೆ ಅಸ್ಸಾಂ ಸರ್ಕಾರ ಪಶ್ಚಿಮ ಬಂಗಾಳಕ್ಕೆ ಸೇರಿದ ಸುಮಾರು 1.30 ಲಕ್ಷ ಅಭ್ಯರ್ಥಿಗಳಿಗೆ ಪರಂಪರೆ ಪ್ರಮಾಣಪತ್ರಗಳನ್ನು ನೀಡುವಂತೆ ಕೋರಿದಾಗ, ಪಶ್ಚಿಮ ಬಂಗಾಳ ಸರ್ಕಾರ ಕೇವಲ ಶೇ. 25ರಷ್ಟು ಪ್ರಕರಣಗಳಲ್ಲಿ ಮಾತ್ರ ಉತ್ತರಿಸಿದೆ ಎಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರಾ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಒಂದು ಕಡೆ ಮಮತಾ ಬ್ಯಾನರ್ಜ 40 ಲಕ್ಷ ಜನರನ್ನು ಎನ್ಆರ್ ಸಿ ಕರಡು ವರದಿಯಿಂದ ಹೊರಗಿಟ್ಟಿರುವುದನ್ನು ಸ್ವಾಗತಿಸುತ್ತಾರೆ. ಮತ್ತೊಂದು ಕಡೆ ಎರಡು ರಾಜ್ಯಗಳ ಗಡಿಯನ್ನು ಸೀಲ್ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧಿರ್ ರಂಜನ್ ಚೌಧರಿ ಅವರು ಆರೋಪಿಸಿದ್ದಾರೆ.
ಎನ್ಆರ್ ಸಿ ಕರಡು ವರದಿಯನ್ನಿಟ್ಟುಕೊಂಡು ಬಿಜೆಪಿ ಮತಗಳ ದೃವೀಕರಣ ಮಾಡುತ್ತಿದ್ದರೆ, ಟಿಎಂಸಿ ಬೆಂಗಾಲಿಗಳ ಸ್ಥಳೀಯ ಭಾವನೆಗಳೊಂದಿಗೆ ಆಟವಾಡುತ್ತಿದೆ ಎಂದು ಇಬ್ಬರು ಕಾಂಗ್ರೆಸ್ ನಾಯಕರು ದೂರಿದ್ದಾರೆ.
ಅಸ್ಸಾಂನಲ್ಲಿ ಅಕ್ರಮ ವಲೆಸಿಗರ ತೆರವು ವಿಚಾರ ಒಂದು ಭಾವನಾತ್ಮಕ ವಿಚಾರವಾಗಿದ್ದು, ಕಾಂಗ್ರೆಸ್ ಅಸ್ಸಾಂನ್ನು ಅಕ್ರಮ ವಲೆಸಿಗರಿಂದ ಮುಕ್ತಗೊಳಿಸಲು ಬದ್ಧವಾಗಿದೆ ಎಂದಿದ್ದಾರೆ.