ನವದೆಹಲಿ: ಯಾವುದೇ ಭಾರತೀಯ ನಾಗರಿಕನ ಹೆಸರು ರಾಷ್ಟ್ರೀಯ ನಾಗರಿಕತ್ವ ನೋಂದಣಿ ಪಟ್ಟಿಯಿಂದ ಕೈ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅಸ್ಸಾಂ ರಾಷ್ಟ್ರೀಯ ನಾಗರಿಕತ್ವ ನೋಂದಣಿ ವಿಚಾರ ಸಂಸತ್ ಕಲಾಪದಲ್ಲೂ ಭಾರಿ ಗದ್ದಲಕ್ಕೆ ಕಾರಣವಾಗಿದ್ದು, ಟಿಎಂಸಿ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಾಜ್ಯಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದೇಶದ ಯಾವುದೇ 'ಭಾರತೀಯ ನಾಗರಿಕನ' ಹೆಸರು ಎನ್ಆರ್ ಸಿ ಪಟ್ಟಿಯಿಂದ ಕೈ ಬಿಡುವುದಿಲ್ಲ. ಅಂತೆಯೇ ಎನ್ಆರ್ ಸಿ ವಿಚಾರವನ್ನು ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ನಾನು ಮತ್ತೆ ಹೇಳುತ್ತಿದ್ದೇನೆ. ಎನ್ಆರ್ ಸಿ ಪಟ್ಟಿಯಲ್ಲಿ ಹೆಸರಿಲ್ಲದವರ ವಿರುದ್ಧ ಯಾವುದೇ ರೀತಿಯ ದಬ್ಬಾಳಿಕೆಯ ಕ್ರಮ ಅನುಸರಿಸುವುದಿಲ್ಲ. ಆದರೆ ಈ ಬಗ್ಗೆ ಅನಗತ್ಯವಾಗಿ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಇದು ನಿಜಕ್ಕೂ ಖಂಡನೀಯ ಎಂದು ಹೇಳಿದರು.
ಇದು ನಿಜಕ್ಕೂ ನ್ಯಾಯೋಚಿತ ಪ್ರಕ್ರಿಯೆಯಾಗಿದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ನೋಂದಣಿ ಪ್ರಕ್ರಿಯೆ ನಡೆದಿದೆ. 1985ರಿಂದಲೇ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರೇ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಆ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದನ್ನು 2005ರಲ್ಲಿ ಅಪ್ ಡೇಟ್ ಮಾಡಿದ್ದರು. ಬಳಿಕ ಇದೀಗ ನಾವು ಮತ್ತೆ ಪರಿಷ್ಕರಣೆ ಮಾಡುತ್ತಿದ್ದೇವೆ. ಸ್ವತಃ ಸುಪ್ರೀಂಕೋರ್ಟ್ ಇದರ ಮೇಲ್ವಿಚಾರಣೆ ನಡೆಸುತ್ತಿದ್ದು, ಇದರ ವಿರುದ್ಧದ ಹೇಳಿಕೆ ನ್ಯಾಯಾಲಯಕ್ಕೆ ಮಾಡಿದ ಅಪಮಾನ. ನಾನು ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ಇದು ಕರಡು ಮಾತ್ರ. ಅಂತಿಮ ಪಟ್ಟಿಯಲ್ಲ. ಪಟ್ಟಿಯಲ್ಲಿ ಹೆಸರಿಲ್ಲದವರು ಮತ್ತೆ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಪ್ರತಿಯೊಬ್ಬರಿಗೂ ಅವಕಾಶ ಸಿಗುತ್ತದೆ. ಸುಖಾಸುಮ್ಮನೆ ಆರೋಪ ಸರಿಯಲ್ಲ ಮತ್ತು ಪ್ರತಿಪಕ್ಷಗಳ ನಡೆ ದುರದೃಷ್ಟಕರ ಎಂದು ರಾಜನಾಥ್ ಸಿಂಗ್ ಹೇಳಿದರು.
ಇನ್ನು ಇದೇ ಎನ್ಆರ್ ಸಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಾಪದಲ್ಲಿ ಟಿಎಂಸಿ ಸದಸ್ಯರು ಭಾರಿ ಗದ್ದಲವೆಬ್ಬಿಸಿದರು. ಪ್ರಮುಖವಾಗಿ ನಿನ್ನೆ ಅಸ್ಸಾಂಗೆ ತೆರಳಿದ್ದ ಟಿಎಂಸಿ ನಿಯೋಗವನ್ನು ಪೊಲೀಸರು ತಡೆದು ವಿಮಾನ ನಿಲ್ದಾಣದಲ್ಲಿಯೇ ಗೃಹಬಂಧನದಲ್ಲಿಟ್ಟ ವಿಚಾರಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದರು.