ನವದೆಹಲಿ: ಭಾರತ ಮತ್ತು ಚೀನಾ ದೇಶಗಳ ನಡುವಿನ ಡೊಕ್ಲಾಂ ಗಡಿ ವಿವಾದ ಈಗ ಮುಗಿದ ಅಧ್ಯಾಯವಾಗಿದ್ದು, ಉಭಯ ದೇಶಗಳು ವಿವಾದದ ಹೊರತಾಗಿ ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸುವತ್ತ ಮುನ್ನಡೆದಿವೆ ಎಂದು ಚೀನಾ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಚೀನಾ ರಾಯಭಾರಿ ಲುವೊ ಝಾಹೋಯಿಯಿ ಅವರು, ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧದ ಪುಸ್ತಕದಲ್ಲಿ ಡೊಕ್ಲಾಂ ಎಂಬ ಪುಟವನ್ನು ನಾವು ತಿರುವಿ ಹಾಕಿ ಮುಂದಿನ ಪುಟಕ್ಕೆ ಸಾಗಿದ್ದೇವೆ. ಅದು ಈಗ ಮುಗಿದ ಅಧ್ಯಾಯ. ಡೊಕ್ಲಾಂ ಹೊರತಾಗಿಯೂ ಭಾರತ ಮತ್ತು ಚೀನಾ ಸಾಕಷ್ಟು ವಿಚಾರಗಳಲ್ಲಿ ಸೌಹಾರ್ಧ ಸಂಬಂಧ ಹೊಂದಿವೆ. ಕೇವಲು ಒಂದೇ ಒಂದು ವಿಚಾರದಿಂದ ಈ ಸಂಬಂಧ ಹಳಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಡೊಕ್ಲಾಂ ವಿಚಾರದ ಬಳಿಕವೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಒಂದೇ ವರ್ಷದಲ್ಲಿ ಸಾಕಷ್ಟು ಭಾರಿ ಭೇಟಿಯಾಗಿದ್ದಾರೆ. ಇದು ಉಭಯ ದೇಶಗಳ ನಾಯಕರಿಗೆ ಪರಸ್ಪರ ಇರುವ ಗೌರವ ಮತ್ತು ನಂಬಿಕೆಗೆ ಸಾಕ್ಷಿ ಎಂದು ಹೇಳಿದ್ದಾರೆ.
ಅಂತೆಯೇ ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಬಂಧ ಗಣನೀಯವಾಗಿ ಉತ್ತಮಗೊಳ್ಳುತ್ತಿದೆ. ಇದು ನಿಜಕ್ಕೂ ಸಂತಸದ ವಿಚಾರ. ನಮ್ಮ ಮುಂದೆ ಇನ್ನೂ ಸಾಕಷ್ಟು ಗಂಭೀರ ಸಮಸ್ಯೆಗಳಿದ್ದು ಈ ಸಮಸ್ಯೆಗಳ ವಿರುದ್ಧ ಭಾರತ ಮತ್ತು ಚೀನಾ ಹೋರಾಡಬೇಕಿದೆ ಎಂದು ಲುವೊ ಝಾಹೋಯಿಯಿ ಅವರು ಹೇಳಿದ್ದಾರೆ.
ಏತನ್ಮಧ್ಯೆ 73 ದಿನಗಳ ಕಾಲ ಭಾರತ ಮತ್ತು ಚೀನಾ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ಗಡಿಭಾಗದಲ್ಲಿ ಚೀನಾ ಸೇನೆ ರಸ್ತೆ ನಿರ್ಮಾಣ ಮಾಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ವರದಿಗೆ ಸ್ಪಷ್ಟನೆ ನೀಡಿರುವ ಚೀನಾ ಸೇನೆ ತಮ್ಮ ಗಡಿ ಭಾಗದಲ್ಲಿ ಮಾತ್ರ ತಾವು ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದೇವೆ ಎಂದು ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos