ಕೊಚ್ಚಿ: ಮಹಾಮಳೆ, ಭೂಕುಸಿತ ಪ್ರವಾಹದಿಂದಾಗಿ ಕೇರಳ ಅಕ್ಷರಶಃ ತತ್ತರಿಸಿದ್ದು ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಕೇರಳದ ಇತಿಹಾಸದಲ್ಲೇ ಈ ಮಟ್ಟಿನ ಮಳೆ ಹಿಂದೆಂದೂ ಆಗಿರಲಿಲ್ಲ. ಇನ್ನು ಪ್ರವಾಹ, ಭೂಕುಸಿತದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಸಾವಿರಾರೂ ಮಂದಿ ನಿರಾಶ್ರಿತರ ಕ್ಯಾಂಪ್ ಗಳಲ್ಲಿ ಆಶ್ರಯ ಪಡೆದಿದ್ದಾರೆ.
ನಿರಾಶ್ರಿತರಿಗಾಗಿ ಕ್ಯಾಂಪ್ ಗಳನ್ನು ತೆರೆಯಲಾಗಿದ್ದು ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆಗೆ ಭಾರತೀಯ ಸೇನೆ ಹಾಗೂ ತುರ್ತು ನಿರ್ವಹಣ ಸಿಬ್ಬಂದಿಗಳು ಸಕ್ರಿಯರಾಗಿದ್ದಾರೆ. ಇನ್ನು ನಿರಾಶ್ರಿತರ ಕ್ಯಾಂಪ್ ಗೆ ನೆರೆ ರಾಜ್ಯಗಳಿಂದ ಆಹಾರ, ಸರಂಜಾಮುಗಳು ಬರುತ್ತಿದೆ. ಇನ್ನು ಇಬ್ಬರು ಐಎಎಸ್ ಅಧಿಕಾರಿಗಳು ತಮ್ಮ ಹೆಗಲ ಮೇಲೆ ಸಾಮಗ್ರಿಗಳನ್ನು ಹೊತ್ತು ನಿರಾಶ್ರಿತ ಕ್ಯಾಂಪ್ ನಲ್ಲಿ ಶೇಖರಿಸುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿದೆ.
ಕೇರಳ ಆಹಾರ ಭದ್ರತೆ ಆಯುಕ್ತ ಎಂಜಿ ರಾಜಮಾಣಿಕ್ಯಂ ಮತ್ತು ವೈನಾಡ್ ಸಬ್ ಕಲೆಕ್ಟರ್ ಎನ್ಎಸ್ಕೆ ಉಮೇಶ್ ಎಂಬುವರು ವಾಹನದಿಂದ ಸಾಮಗ್ರಿಗಳನ್ನು ಅನ್ ಲೋಡ್ ಮಾಡುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿದ್ದು ಐಎಎಸ್ ಅಧಿಕಾರಿಗಳ ಈ ಕಾರ್ಯವನ್ನು ನೆಟಿಗರು ಪ್ರಶಂಸಿಸುತ್ತಿದ್ದಾರೆ.
ಕೇರಳದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಇಲ್ಲಿಯವರೆಗೂ 100ಕ್ಕೂ ಮಂದಿ ಮೃತಪಟ್ಟಿದ್ದು 50 ಸಾವಿರಕ್ಕೂ ಹೆಚ್ಚು ನಿರಾಶ್ರಿತರಾಗಿದ್ದಾರೆ.