ದೇಶ

ವಾಜಪೇಯಿಯವರು ಎಂದಿಗೂ ಒತ್ತಡಕ್ಕೆ ಮಣಿಯಲಿಲ್ಲ, ಅಷ್ಟಕ್ಕೂ ಅವರು ಅಟಲ್: ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಭಾರತದ ಮಾಜಿ ಪ್ರಧಾನ ಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ತಮ್ಮ ಬದುಕನ್ನು ಈ ದೇಶದ ಜನರಿಗಾಗಿ ಮುಡಿಪಾಗಿಟ್ಟಿದ್ದರು. ಭಾರತೀಯರ ಸೇವೆ ಮಾಡಲು ಅವರು ಯುವಕರಿರುವಾಗಲೇ ನಿರ್ಧರಿಸಿದ್ದರು. ಈ ದೇಶದಲ್ಲಿ ಕೇವಲ ಒಂದೇ ಒಂದು ಪಕ್ಷ ತನ್ನ ಪ್ರಾಬಲ್ಯ ಹೊಂದಿದ್ದಾಗ ಅವರು ರಾಜಕೀಯ ಜೀವನ ಪ್ರವೇಶಿಸಿದರು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಮರಿಸಿಕೊಂಡರು.

ದೆಹಲಿಯಲ್ಲಿ ಇಂದು ಅಟಲ್ ಜೀಯವರ ಸ್ಮರಣಾರ್ಥ ನಡೆದ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಅವರು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ ತಮ್ಮ ತತ್ವ, ಆದರ್ಶಗಳಿಗೆ ಅವರೆಂದೂ ರಾಜಿಯಾಗಿರಲಿಲ್ಲ. ಭಾರತವನ್ನು ಪ್ರಬಲ ಪರಮಾಣು ಶಕ್ತಿ ರಾಷ್ಟ್ರವನ್ನಾಗಿ ಮಾಡಲು ಅವರ ಅವಿರತ ಪರಿಶ್ರಮದಿಂದ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳಾಗಿವೆ. ಅವರು ಯಾವುದೇ ಒತ್ತಡಗಳಲ್ಲಿ ಮಣಿಯಲಿಲ್ಲ ಎಂದರು.

ಅಟಲ್ ಜೀಯವರು 13 ದಿನಗಳ ಕಾಲ ಪ್ರಧಾನಿಯಾಗಿದ್ದಾಗ ಯಾವುದೇ ಪಕ್ಷ ಅವರಿಗೆ ಬೆಂಬಲ ನೀಡಲು ಸಿದ್ದವಿರಲಿಲ್ಲ. ಇದರಿಂದಾಗಿ ಸರ್ಕಾರ ಬಿದ್ದುಹೋಯಿತು. ನಿನ್ನೆ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ ಬಜ್ ರಂಗ್ ಪುನಿಯಾ ತಮಗೆ ಸಿಕ್ಕಿದ ಚಿನ್ನದ ಪದಕವನ್ನು ಅಟಲ್ ಜೀಗೆ ಅರ್ಪಿಸಿದರು. ಇದರಿಂದ ಅವರ ವ್ಯಕ್ತಿತ್ವ ಎಂತಹದ್ದು ಎಂದು ಗೊತ್ತಾಗುತ್ತದೆ ಎಂದರು.

ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಮಾತನಾಡಿ, ನಾನು ಅನೇಕ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದೇನೆ. ಆದರೆ ಇಂತಹ ಸಭೆಯನ್ನುದ್ದೇಶಿಸಿ ಅಟಲ್ ಜೀ ಇಲ್ಲದೆ ಮಾತನಾಡಬೇಕಾಗಿ ಬರಬಹುದೆಂದು ಭಾವಿಸಿರಲಿಲ್ಲ.  ನನ್ನ ಮತ್ತು ಅಟಲ್ ಜೀಯವರ ಸ್ನೇಹ 65 ವರ್ಷಗಳಷ್ಟು ಹಿಂದಿನದ್ದು. ಇಷ್ಟು ವರ್ಷಗಳಲ್ಲಿ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಒಟ್ಟಿಗೆ ಕೆಲಸ ಮಾಡುತ್ತಾ ನಮ್ಮ ಅನುಭಗಳನ್ನು ಹಂಚಿಕೊಂಡುತ್ತಾ ಒಟ್ಟಿಗೆ ಓದುತ್ತಾ ಸಾಗಿ ಬಂದಿದ್ದೆವು ಎಂದು ನೆನಪು ಮಾಡಿಕೊಂಡರು.

SCROLL FOR NEXT