ನವದೆಹಲಿ:"ಉತ್ತರ ಕೊಡಬೇಕಾಗಿ ಬಂದರೆ ನಾನೇ ಉತ್ತರ ಕೊಡುತ್ತೇನೆ, ಎಲ್ಲರಿಗೆ ಉತ್ತರಿಸುತ್ತೇನೆ.... ಮತ್ತು ಅದು ಬಲವಾದ ಉತ್ತರವಾಗಿರಲಿದೆ" ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿದು ಹೇಳಿದ್ದಾರೆ. ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರಕ್ಕೆ ಪಾಕಿಸ್ತಾನಕ್ಕೆ ತೆರಳಿದ್ದಾಗ ಅಲ್ಲಿನ ಸೇನಾ ಮುಖ್ಯಸ್ಥರನ್ನು ಆಲಂಗಿಸಿಕೊಂಡಿದ್ದರ ಕುರಿತು ಸಿಧು ಈ ಹೇಳಿಕೆ ನಿಡಿದ್ದಾರೆ.
ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರನ್ನು ಆಲಂಗಿಸಿಕೊಂಡ ಸಿಧುವಿನ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟೀಕಿಸಿದ್ದು "ಸಿಧು ನಡೆದುಕೊಂಡಿರುವ ರೀತಿ ಸರಿಯಾದುದಲ್ಲಎಂದು ನಾನು ಭಾವಿಸುತ್ತೇನೆ.ಪಾಕಿಸ್ತಾನದ ಸೇನಾ ಮುಖ್ಯಸ್ಥರ ಮೇಲಿನ ತನ್ನ ಪ್ರೀತಿಯನ್ನು ತೋರಿಸಲು ಅವರು ಹಾಗೆ ಮಾಡಿದ್ದಾರೆ. ನಾನು ಅದರ ಪರವಾಗಿಲ್ಲ . ನಮ್ಮ ಸೈನಿಕರು ಪಾಕ್ ಉಗ್ರರಿಂದ ಪ್ರತಿನಿತ್ಯ ಹತರಾಗುತ್ತಿದ್ದಾರೆ. ಇದನ್ನು ಸಿಧು ಅರ್ಥೈಸಿಕೊಳ್ಳಬೇಕು. ತನ್ನ ಸ್ವಂತ ರೆಜಿಮೆಂಡ್ ನ ಓರ್ವ ಮೇಜರ್ ಹಾಗೂ ಇಬ್ಬರು ಜವಾನರು ಕಳೆದ ಕೆಲ ತಿಂಗಳ ಹಿಂದೆ ಕೊಲ್ಲಲ್ಪಟ್ಟರು" ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಸಿಧು ಇಂದು ಈ ಮೇಲಿನಂತೆ ಹೇಳಿಕೆ ನಿಡಿದ್ದಾರೆ.ನಿನ್ನೆ (ಭಾನುವಾರ) ಪಾಕಿಸ್ತಾನದಿಂದ ಮರಳಿದ್ದ ಸಿಧು ಅಲ್ಲಿ ತಾವು ಸೇನಾ ಮುಖ್ಯಸ್ಥರನ್ನು ಆಲಂಗಿಸಿಕೊಂಡದ್ದನ್ನು ಸಮರ್ಥಿಸಿಕೊಂಡಿದ್ದರು."ನಾವು ಒಂದೇ ಸಂಸ್ಕೃತಿಗೆ ಸೇರಿದವರು." ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು
ಏತನ್ಮಧ್ಯೆ, ಆಮ್ ಆದ್ಮಿ ಪಕ್ಷ ಶಾಸಕ ಮತ್ತು ಪ್ರತಿಪಕ್ಷ ನಾಯಕ ಸುಖ್ಪಾಲ್ ಸಿಂಗ್ ಖೈರಾ ಇಂದು ಸಿಧು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಸಿಧು ಸರಿಯಾಗಿಯೇ ನಡೆದುಕೊಂಡಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇಮ್ರಾನ್ ಆಹ್ವಾನದ ಮೇರೆಗೆ ಇಸ್ಲಾಮಾಬಾದ್ನಲ್ಲಿರುವ ಐವನ್-ಇ-ಸದ್ರ್ (ಅಧ್ಯಕ್ಷರ ಮನೆ) ನಲ್ಲಿ ಪ್ರಮಾಣ ವಚನ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಸಿಧು ಭಾಗವಹಿಸಿದ್ದರು.