ನವದೆಹಲಿ: ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಮಾನಹಾನಿ ಲೇಖನ ಪ್ರಕಟಿಸಿದೆ ಎಂದು ಆರೋಪಿಸಿ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಅನಿಲ್ ಅಂಬಾನಿ ಕಾಂಗ್ರೆಸ್ ಮುಖವಾಣಿ ನ್ಯಾಷನಲ್ ಹೆರಾಲ್ಡ್ ವಿರುದ್ಧ ದುಬಾರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮೂಲಗಳ ಪ್ರಕಾರ ರಫೇಲ್ ಹಗರಣ ಸಂಬಂಧ ಪತ್ರಿಕೆ ತಮ್ಮ ಚಾರಿತ್ರ್ಯ ವಧೆಗೆ ಪ್ರಯತ್ನಿಸಿದೆ ಎಂದು ಆರೋಪಿಸಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹ ಸಂಸ್ಥೆ ನ್ಯಾಷನಲ್ ಹೆರಾಲ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ಹೂಡಿದ್ದು, 5 ಸಾವಿರ ಕೋಟಿ ನಷ್ಟ ಪರಿಹಾರ ನೀಡುವಂತೆ ಕೋರಿದೆ. ನ್ಯಾಷನಲ್ ಹೆರಾಲ್ಡ್ ನ ಸಂಪಾದಕರಾದ ಝಫರ್ ಅಘಾ, ವರದಿ ಲೇಖಕ ವಿಶ್ವದೀಪಕ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ರಿಲಯನ್ಸ್ ಡಿಫೆನ್ಸ್, ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಏರೋ ಸ್ಟ್ರಕ್ಚರ್ ಸಂಸ್ಥೆಗಳು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿವೆ. ಅರ್ಜಿ ಸ್ವೀಕರಿಸಿದ ನ್ಯಾಯಮೂರ್ತಿ ಪಿಜೆ ತಮಕುವಾಲಾ
ಅವರು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ವಿವರ ನೀಡುವಂತೆ ಸೆಪ್ಟೆಂಬರ್ 7ಕ್ಕೆ ವಿಚಾರಣೆ ಮುಂದೂಡಿದ್ದಾರೆ.
ಈ ಹಿಂದಷ್ಟೇ ಇದೇ ವಿಚಾರವಾಗಿ ರಿಲಯನ್ಸ್ ಸಮೂಹ ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೇವಾಲಾ, ಅಶೋಕ್ ಚವಾಣ್, ಸಂಜಯ್ ನಿರುಪಮ್, ಅನುರಾಗ್ ನಾರಾಯಣ ಸಿಂಗ್, ಉಮ್ಮನ್ ಚಾಂಡಿ, ಶಕ್ತಿಸಿನ್ಹಾ ಗೋಹಿಲ್, ಅಭಿಷೇಕ್ ಮನು ಸಿಂಘ್ವಿ, ಸುನಿಲ್ ಜಾಖಡ್ ಮತ್ತು ಪ್ರಿಯಾಂಕಾ ಚತುರ್ವೇದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos