ಚೆನ್ನೈ: ತಮಿಳಾನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧಿನಾಯಕ ಕರುಣಾನಿಧಿ ಅವರ ಸಾವಿನ ಬೆನ್ನಲ್ಲೇ ಡಿಎಂಕೆ ಪಕ್ಷದ ಅಂತರಿಕ ಭಿನ್ನಮತ ತಾರಕಕ್ಕೇರಿದ್ದು, ತಮ್ಮನ್ನು ಪಕ್ಷಕ್ಕೆ ಪುನಃ ಸೇರಿಸಿಕೊಳ್ಳದ್ದಿದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕರುಣಾನಿಧಿ ಹಿರಿಯ ಪುತ್ರ ಎಂಕೆ ಅಳಗಿರಿ ಎಚ್ಚರಿಕೆ ನೀಡಿದ್ದಾರೆ.
ಚೆನ್ನೈನಲ್ಲಿ ಮಾತನಾಡಿದ ಅಳಗಿರಿ ಅವರು, ಡಿಎಂಕೆ ಪಕ್ಷದ ಕಾರ್ಯಕರ್ತರು ತಾವೇ ಪಕ್ಷದ ಮುಂದಾಳತ್ವ ವಹಿಸಿಕೊಂಡು ಕರುಣಾನಿಧಿ ಅವರ ಗೌರವಾರ್ಪಣೆ ಯಾತ್ರೆ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ. ರಾಜ್ಯದಲ್ಲಿ ಪಕ್ಷ ಮೂಲೆಗುಂಪಾಗಿದ್ದು, ನಾನು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಯಾತ್ರೆ ಹಮ್ಮಿಕೊಂಡಿದ್ದೇನೆಯೇ ಹೊರತು ಪಕ್ಷವನ್ನು ಇಬ್ಭಾಗ ಮಾಡಲು ಅಲ್ಲ. ಪಕ್ಷವನ್ನು ರಕ್ಷಣೆ ಮಾಡಲು ಈಗ ಕಲೈನರ್ ಇಲ್ಲ. ಹೀಗಾಗಿ ಆ ಜವಾಬ್ದಾರಿ ನಮ್ಮ ಮತ್ತು ಕಾರ್ಯಕರ್ತರ ಮೇಲೆ ಬಿದ್ದಿದೆ. ಇದೇ ಕಾರಣಕ್ಕೆ ಪಕ್ಷಕ್ಕೆ ನನ್ನ ಅಗತ್ಯತೆ ಇದ್ದು, ನನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಇಲ್ಲ ಗಂಭೀರ ಸಮಸ್ಯೆ ಎದುರಿಸಿ ಎಂದು ಅಳಗಿರಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಳಗಿರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ತಮ್ಮೊಂದಿಗಿದ್ದು, ಅವರನ್ನು ಸ್ಟಾಲಿನ್ ತಡೆಯುವ ಯತ್ನ ನಡೆಸಿದ್ದಾರೆ. ಅಲ್ಲದೆ ನನ್ನನ್ನು ಕೂಡ ಪಕ್ಷಕ್ಕೆ ವಾಪಸ್ ಆಗದಂತೆ ತಡೆಯಲು ಷಡ್ಯಂತ್ರ ರೂಪಿಸಿದ್ದರು ಎಂದು ಅಳಗಿರಿ ಆರೋಪಿಸಿದ್ದರು.
ತಮಿಳುನಾಡಿನಲ್ಲಿ ಕರುಣಾನಿಧಿ ಸಾವಿನ ಬೆನ್ನಲ್ಲೇ ಅಳಗಿರಿ ಅವರನ್ನು ಪಕ್ಷಕ್ಕೆ ಪುನಃ ಸೇರ್ಪಡೆಗೊಳಿಸುವ ಪರ ಮತ್ತು ವಿರೋಧ ವಾದಗಳು ಬಲವಾಗಿ ಕೇಳಿಬರುತ್ತಿದ್ದು, ಇದೇ ವೇಳೆ ಎಂಕೆ ಸ್ಟಾಲಿನ್ ಅವರನ್ನು ಪಕ್ಷದ ಅಧ್ಯಕ್ಷ ಗಾದಿಗೇರಿಸುವ ಕಸರತ್ತು ಕೂಡ ಸಾಗಿದೆ. ಈಗಾಗಲೇ ಸ್ಟಾಲಿನ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಅವರೇ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ ಸ್ಟಾಲಿನ್ ಅಣ್ಣ ಅಳಗಿರಿ ಕೂಡ ಅಖಾಡಕ್ಕೆ ಧುಮುಕ್ಕಿದ್ದು, ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪಕ್ಷ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 2014ರಲ್ಲಿ ಅಳಗಿರಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡ ಆರೋಪದ ಮೇರೆಗೆ ಪಕ್ಷದಿಂದ ಉಚ್ಛಾಟಿಸಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos