ದೇಶ

ತಾಜ್ ಮಹಲ್ ಸಂರಕ್ಷಣೆ ಕುರಿತು ಸಲಹೆ ಕೇಳಿದ ಸುಪ್ರೀಂ ಕೋರ್ಟ್

Lingaraj Badiger
ನವದೆಹಲಿ: ವಿಶ್ವ ವಿಖ್ಯಾತ ತಾಜ್ ಮಹಲ್ ಅನ್ನು ಸಂರಕ್ಷಿಸುವ ಕುರಿತು ವಿಸ್ತೃತವಾದ ಸಲಹೆಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸ್ಮಾರಕ ನಿರ್ವಹಣೆಗೆ ಸಂಬಂಧಿಸಿದ ಅರ್ಜಿದಾರರಿಗೆ ಸೂಚಿಸಿದೆ.
ಪರಿಸರ ತಜ್ಞ ಎಂ. ಜಿ. ಮೆಹ್ತಾ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಹಾಗೂ ಉತ್ತರ ಪ್ರದೇಶ ಸರ್ಕಾರ ಪ್ರಮುಖ ಅರ್ಜಿದಾರರಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ಮದನ್ ಬಿ ಲೋಕುರ್ ನೇತೃತ್ವದ ತ್ರಿಸದಸ್ಯ ಪೀಠ, ತಾಜ್ ಮಹಲ್ ರಕ್ಷಣೆಗೆ ಸಂಬಂಧಿಸಿದಂತೆ ನಿಮ್ಮ ಸಲಹೆ ಮತ್ತು ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿದೆ.
ಕಳೆದ ವಿಚಾರಣೆಯಲ್ಲಿ ಐತಿಹಾಸಿಕ ತಾಜ್ ಮಹಲ್ ಅನ್ನು ಸಂರಕ್ಷಿಸಿದ ಮತ್ತು ಸರಿಯಾಗಿ ನಿರ್ವಹಣೆ ಮಾಡದ ಉತ್ತರ ಪ್ರದೇಶ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ತಾಜ್ ಮಹಲ್ ನ್ನು ರಕ್ಷಿಸಿ ಇಲ್ಲವೇ ನಾಶಪಡಿಸಿ ಎಂದು ಕಿಡಿಕಾರಿತ್ತು.
ಕಲುಷಿತ ಅನಿಲದಿಂದಾಗಿ ತಾಜ್ ಮಹಲ್ ಸುತ್ತಮುತ್ತಲಿನ ಪ್ರದೇಶದಲ್ಲಿನ ಪರಿಸರ ಹಾಳಾಗಿದ್ದು, ಇದನ್ನು ರಕ್ಷಿಸಬೇಕೆಂದು ಪರಿಸರ ತಜ್ಞ ಎಂ. ಜಿ. ಮೆಹ್ತಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
SCROLL FOR NEXT