ಶ್ರೀನಗರ: ಉಗ್ರರು ಹಾಗೂ ಭದ್ರತಾ ಪಡೆಗಳು ತಮ್ಮ ಕುಟುಂಬಸ್ಥರನ್ನು ಬಲಿಪಶುಗಳನ್ನಾಗಿರುತ್ತಿರುವುದು ಅತ್ಯಂತ ಖಂಡನೀಯ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶುಕ್ರವಾರ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ನಾಲ್ವರು ಪೊಲೀಸರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಅಕ್ರೋಶಗೊಂಡಿದ್ದ ಭದ್ರತಾ ಪಡೆಗಳು ಉಗ್ರರ ಮನೆಗಳನ್ನು ಧ್ವಂಸಗೊಳಿಸಿ, ಅವರ ಕುಟುಂಬಸ್ಥರನ್ನು ಬಂಧನಕ್ಕೊಳಪಡಿಸಿದ್ದರು. ಇದಕ್ಕೆ ಪ್ರತೀಕಾರವೆಂಬಂತೆ ಇದೀಗ ಪೊಲೀಸರ ಮನೆಗಳಿಗೆ ನುಗ್ಗಿರುವ ಉಗ್ರರು 9 ಮಂದಿಯನ್ನು ಅಪಹರಣ ಮಾಡಿದ್ದಾರೆ.
ಘಟನೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮುಫ್ತಿಯವರು, ಕುಟುಂಬಸ್ಥರು ಸಾವು-ನೋವುಗಳಿಗೊಳಗಾಗಬಾರದು. ಕುಟುಂಬಸ್ಥರು ಸಂಕಷ್ಟಕ್ಕೊಳಗಾಗುವಂತೆ ಮಾಡಬಾರದು. ಎಲ್ಲದಕ್ಕೂ ಕೊಂಚ ನಿಯಂತ್ರಣವಿರಬೇಕು ಎಂದು ಹೇಳಿದ್ದಾರೆ.
ಸೇನೆ ಹಾಗೂ ಉಗ್ರರು ತಮ್ಮ ತಮ್ಮ ಕುಟುಂಬಸ್ಥರನ್ನು ಬಲಿಪಶುಗಳನ್ನಾಗಿ ಮಾಡುತ್ತಿರುವುದು ನಿಜಕ್ಕೂ ಖಂಡನೀಯ. ಇದು ನಮ್ಮ ಪರಿಸ್ಥಿತಿ ಅತ್ಯಂತ ಕೀಳುಮಟ್ಟಕ್ಕಿಳಿದಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.