ದೇಶ

ವಿವಿಐಪಿ ಹಗರಣದ ವಿಚಾರಣೆ: ಆತಂಕ, ಕೋಪೋದ್ರಿಕ್ತನಾದ ಕ್ರಿಶ್ಚಿಯನ್ ಮೈಕೆಲ್; ಲಂಚ ಆರೋಪ ನಿರಾಕರಣೆ!

Srinivas Rao BV
ನವದೆಹಲಿ: ದುಬೈ ನಿಂದ ಗಡಿಪಾರಾಗಿ ಭಾರತಕ್ಕೆ ಬಂದಿರುವ ಬಹುಕೋಟಿ ವಿವಿಐಪಿ ಚಾಪರ್ ಹಗರಣದ ಪ್ರಮುಖ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಯುಪಿಎ ಸರ್ಕಾರದಿಂದ ಲಂಚ ತೆಗೆದುಕೊಂಡಿರುವ ಆರೋಪವನ್ನು ಸಿಬಿಐ ಅಧಿಕಾರಿಗಳೆದುರು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.  
ಸಿಬಿಐ ವಶದಲ್ಲಿರುವ ಮೈಕೆಲ್, ಮುಖ್ಯಕಚೇರಿಯಲ್ಲಿ ತೀವ್ರ ಆತಂಕಕ್ಕೊಳಗಾಗಿದ್ದು, ವೈದ್ಯರು ತಪಾಸಣೆ ನಡೆಸಬೇಕಾಯಿತು. ತಪಾಸಣೆ, ಚಿಕಿತ್ಸೆಯ ಬಳಿಕ ನಡೆದ ವಿಚಾರಣೆಯಲ್ಲಿ ಹಣ ವರ್ಗಾವಣೆ ಹಾಗೂ ಡೈರಿಯಲ್ಲಿರುವ ಸಾಕ್ಷ್ಯಗಳ ದಾಖಲೆಗಳನ್ನು ಗುರುತಿಸುವುದಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಕ್ರಿಶ್ಚಿಯನ್ ಮೈಕೆಲ್,  ತನಗೆ ಡಿಸ್ಲೆಕ್ಸಿಯಾ (ಬರೆದಿರುವುದನ್ನು ವಿವರಿಸಲು ವಿಫಲವಾಗುವ ಅಥವ ಕಷ್ಟ ಎದುರಿಸುವ ಸಮಸ್ಯೆ)  ಇದ್ದು ಲಂಚ ನೀಡಿರುವ ಡೈರಿಯಲ್ಲಿ ಬರೆದಿರುವುದು ಮತ್ತೋರ್ವ ಮಧ್ಯವರ್ತಿ ಗಿಡೋ ಹಶ್ಚೆ  ಎಂದು ಬಾಯಿಬಿಟ್ಟಿದ್ದಾರೆ. 
ಲಂಚ ನೀಡಿರುವ ಬಗ್ಗೆ ಬರೆಯಲಾಗಿರುವ ಚೀಟಿಯಲ್ಲಿ ಸರ್ಕಾರದ ಹಲವು ಅಧಿಕಾರಿಗಳು, ಮುಖ್ಯಸ್ಥರ ಹೆಸರೂ ಉಲ್ಲೇಖವಾಗಿದೆ. ಇದರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿವಿಐಪಿ ಚಾಪರ್ಸ್ ಹಗರಣದ ಚಾಲನಾ ಶಕ್ತಿಯೆಂದು ಉಲ್ಲೇಖಿಸಲಾಗಿದೆ. 
ಹಗರಣದ ಸಂಬಂಧ ತನ್ನೊಂದಿಗೆ ತಳುಕು ಹಾಕಿಕೊಂಡಿರುವ ಭಾರತೀಯ ರಾಜಕಾರಣಿಗಳನ್ನು ರಕ್ಷಿಸುವುದಕ್ಕಾಗಿ ಸಿಬಿಐ ಅಧಿಕಾರಿಗಳ ಎದುರು ಮತ್ತೋರ್ವ ಮಧ್ಯವರ್ತಿ ಗಿಡೋ ಹಶ್ಚೆ ಹೆಸರನ್ನು ಬಾಯಿಬಿಟ್ಟಿರುವ ಕ್ರಿಶ್ಚಿಯನ್ ಮೈಕೆಲ್, ಆರೋಪವನ್ನು ಈಗ  ಗಿಡೋ ಹಶ್ಚೆ ಮೇಲೆ ವರ್ಗಾವಣೆ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. 
SCROLL FOR NEXT