ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣೆ ಮತದಾನ ಮುಕ್ತಾಯವಾಗಿದ್ದು, ಚಾಣಕ್ಯ ಟುಡೇಸ್ ಚುನಾವಣೋತ್ತರ ಸಮೀಕ್ಷಾ ವರದಿ ಬಿಡುಗಡೆಯಾಗಿದೆ.
ಚಾಣಕ್ಯ ಟುಡೇಸ್ ಚುನಾವಣೋತ್ತರ ಸಮೀಕ್ಷಾ ವರದಿಯ ಅನ್ವಯ ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷಗಳು ಜಯ ಸಾಧಿಸುವ ಸಾಧ್ಯತೆ ಇದ್ದು, ಅಂತೆಯೇ ಮಧ್ಯ ಪ್ರದೇಶ ಮತ್ತು ಛತ್ತೀಸ್ ಘಡದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಉಳಿದಂತೆ ಮಿಜೋರಾಂನಲ್ಲಿ ಎಂಎನ್ಎಫ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಮಿಜೋರಾಂ ನಲ್ಲಿ ಕಾಂಗ್ರೆಸ್ ಪಕ್ಷ 14 ರಿಂದ 18 ಕ್ಷೇತ್ರಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದ್ದು, ಅಂತೆಯೇ ಅದರ ನಿಕಟ ಪೈಪೋಟಿ ಪಕ್ಷವಾದ ಎಂಎನ್ಎಫ್ ಪಕ್ಷ 16ರಿಂದ 20 ಸ್ಥಾನಗಳಿಸುವ ಸಾಧ್ಯತೆ ಇದೆ.
ಇನ್ನು ಮಧ್ಯ ಪ್ರದೇಶದಲ್ಲಿ ಅತಂತ್ರ ನಿರ್ಮಾಣವಾಗುವ ಸಾಧ್ಯತೆ ಇದ್ದು, ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. 230 ಸ್ಥಾನಗಳ ಪೈಕಿ ಕಾಂಗ್ರೆಸ್ 104ರಿಂದ 122 ಸ್ಥಾನ ಗಳಿಸುವ ಸಾಧ್ಯತೆ ಇದ್ದು, ಆಡಳಿತಾ ರೂಢ ಬಿಜೆಪಿ ಪಕ್ಷ ಕೂಡ 102 ರಿಂದ 120 ಸ್ಥಾನಗಳಿಸುವ ಸಾಧ್ಯತೆ ಇದೆ. ಉಳಿದಂತೆ ಕ್ಷೇತ್ರಗಳಲ್ಲಿ ಇತರರು ಜಯ ಗಳಿಸುವ ಸಾಧ್ಯತೆ ಇದೆ.
ಇನ್ನು ತೆಲಂಗಾಣ ಟಿಆರ್ ಎಸ್ ನಾಗಾಲೋಟ ಮುಂದುವರೆಯುವ ಲಕ್ಷಣಗಳು ಗೋಚರಿಸುತ್ತಿದ್ದು, ಟಿಆರ್ ಎಸ್ 85, ಕಾಂಗ್ರೆಸ್ 27, ಬಿಜೆಪಿ 2 ಮತ್ತು ಇತರರು 5 ಸ್ಥಾನಗಳಿಸುವ ಸಾಧ್ಯತೆ ಇದೆ. ಅಂತೆಯೇ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಬಹುಮತಗಳಿಸುವ ಸಾಧ್ಯತೆ ಇದ್ದು, ಇಲ್ಲಿ ಆಡಳಿತಾ ರೂಢ ಬಿಜೆಪಿಗೆ ಮುಖಭಂಗವಾಗುವ ಸಾಧ್ಯತೆ ಇದೆ. ರಾಜಸ್ತಾನದಲ್ಲಿ ಕಾಂಗ್ರೆಸ್ 105, ಬಿಜೆಪಿ 85 ಮತ್ತು ಇತರರು 9 ಸ್ಥಾನಗಳಿಸುವ ಸಾಧ್ಯತೆ ಇದೆ.
ಛತ್ತೀಸ್ ಘಡದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಛತ್ತೀಸ್ ಘಡದಲ್ಲಿ ಬಿಜೆಪಿ 41, ಕಾಂಗ್ರೆಸ್ 43 ಮತ್ತು ಇತರರು 6 ಸ್ಥಾನಗಳಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos