ಚೆನ್ನೈ: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಚೆನ್ನೈ ನ ಡಾ.ರೇಲಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಸತತ ಮೂರು ಗಂಟೆಗಳ ಕಾಲ ನಡೆಸಲಾದ ಲಿವರ್ ಬೈಪಾಸ್ ಹಾಗೂ ಪಿತ್ತಕೋಶ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಡಾ. ಮಹಮದ್ ರೇಲಾ ಅವರು 111 ರ ಹರೆಯದ ಶ್ರೀಗಳಿಗೆ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಮಾತನಾಡಿರುವ ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಶ್ರೀಗಳಿಗೆ ಇನ್ನೂ 7 ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಗಾಗಿ ನೀಡಲಾಗಿದ್ದ ಅರವಳಿಕೆಯಿಂದ ಚೇತರಿಸಿಕೊಂಡ ನಂತರ ಶ್ರೀಗಳು ಮಾತನಾಡಿದ್ದು, ಆಸ್ಪತ್ರೆ ಸಿಬ್ಬಂದಿಗಳ ಬಳಿ ತಾವು ಇರುವ ಸ್ಥಳದ ಬಗ್ಗೆ ಕೇಳಿದ್ದು, ಕಿರಿಯ ಶ್ರೀಗಳ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.