ಲಖನೌ: ಓರ್ವ ಪೊಲೀಸ್ ಅಧಿಕಾರಿ ಹಾಗೂ ಯುವಕನನ್ನು ಬಲಿಪಡೆದ ಉತ್ತರ ಪ್ರದೇಶದ ಬುಲಂದ್ ಶಹರ್ ಹಿಂಸಾಚಾರ ಪ್ರಕರಣದ ತನಿಖೆ ಚುರುಕುಗೊಳಿಸಿದ ವಿಶೇಷ ತನಿಖಾ ತಂಡ(ಎಸ್ ಐಟಿ), ನೂರಾರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದೆ.
ವರದಿಗಳ ಪ್ರಕಾರ, ಒಂದು ಸಿಸಿಟಿವಿ ದೃಶ್ಯದಲ್ಲಿ, ಯುವಕನೊಬ್ಬ ಹುತಾತ್ಮ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಅವರ ಗನ್ ಕದ್ದು, ಅವರನ್ನೇ ಹತ್ಯೆ ಮಾಡುವ ದೃಶ್ಯ ಸೆರೆಯಾಗಿದೆ.
ಚಿಂಗ್ರಾವತಿ ಪೊಲೀಸ್ ಔಟ್ ಪೋಸ್ಟ್ ಬಳಿ ಇರುವ ದಿಲಾವರಿ ದೇವಿ ಕನ್ಯಾ ಪಿಜಿ ಕಾಲೇಜ್ ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಡಿಸೆಂಬರ್ 3ರಂದು ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡುತ್ತಿರುವ ದೃಶ್ಯವನ್ನು ಎಸ್ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ದೃಶ್ಯದಲ್ಲಿರುವ ಯುವಕ ಚಿಂಗ್ರಾವತಿ ಗ್ರಾಮದ ಸುಮಿತ್ ಎಂದು ಗುರುತಿಸಲಾಗಿದ್ದು, ಐದು ಯುವಕರ ಗುಂಪಿನೊಂದಿಗೆ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಅವರನ್ನು ಸುತ್ತುವರಿದು, ಅವರ ಗನ್ ಕದ್ದು, ಅವರನ್ನೇ ಶೂಟ್ ಮಾಡುತ್ತಾನೆ. ಇದಕ್ಕು ಮುನ್ನ ಹಿಂಸಾಚಾರದಲ್ಲಿ ತೊಡಗಿದ್ದ ಈ ಯುವಕ, ಪೊಲೀಸರ ಮೇಲೆ ಕಲ್ಲು ತೂರಾಟ ಸಹ ನಡೆಸಿದ್ದ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಈ ಮಧ್ಯೆ, ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ ಯುವಕ ಹೆಸರು ಎಫ್ಐಆರ್ ನಲ್ಲಿ ಉಲ್ಲೇಖಿಸಿಲ್ಲ. ಆದರೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ಯುವಕ ಹಿಂಸಾಚಾರದ ನಂತರ ಕುಟುಂಬ ಸಮೇತ ನಾಪತ್ತೆಯಾಗಿದ್ದಾನೆ.
ಡಿಸೆಂಬರ್ 3ರಂದು ಅಕ್ರಮ ಕಸಾಯಿ ಖಾನೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಆರಂಭವಾದ ಕೋಮು ಸಂಘರ್ಷವನ್ನು ತಡೆಯಲು ಮುಂದಾದ ಸುಬೋಧ್ ಕುಮಾರ್ ಸಿಂಗ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಈಗಾಗಲೇ 9 ಆರೋಪಿಗಳನ್ನು ಬಂಧಿಸಿದ್ದು, 27 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.