ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊನ್ನೆ ಕೇವಲ 24 ಗಂಟೆಗಳಲ್ಲಿ ಕಳೆದ ನಾಲ್ಕು 4 ವರ್ಷಗಳಲ್ಲೇ ಕಂಡಿರದ ಹಿನ್ನಡೆ ಉಂಟಾಗಿದ್ದು, 2019 ಕ್ಕೂ ಮುನ್ನ ಈ ಹಿನ್ನೆಡೆ ತಮ್ಮ ಜನಪ್ರಿಯತೆ ಮೇಲೆ ಪರಿಣಾಮ ಬೀರದಂತೆ ಮೋದಿ ಕೈಗೊಳ್ಳುವ ಕೆಲವು ಮಹತ್ವದ ನಿರ್ಧಾರಗಳ ಬಗ್ಗೆ ಕುತೂಹಲ ಮೂಡಿಸಿದೆ.
ಮೊದಲನೆಯದು ಆರ್ ಬಿಐ ನ ಗೌರ್ನರ್ ಉರ್ಜಿತ್ ಪಟೇಲ್ ನಿರ್ಗಮನವಾಗಿದ್ದರೆ ಈ ಬೆನ್ನಲ್ಲೆ ಮೋದಿ ಸರ್ಕಾರಕ್ಕೆ ಬರಸಿಡಿಲಿನಂತೆ ಬಂದು ಅಪ್ಪಳಿಸಿದ್ದು ಪಂಚರಾಜ್ಯಗಳ ಚುನಾವಣೆಯಲ್ಲಿ 3 ರಾಜ್ಯಗಳ ಸೋಲು. ಉರ್ಜಿತ್ ಪಟೇಲ್ ಅವರೇನೋ ವೈಯಕ್ತಿಕ ಕಾರಣಗಳಿಂದಾಗಿ ತಾವು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದರೂ ಸಹ ನವದೆಹಲಿಯ ಒತ್ತಡಕ್ಕೆ ಮಣಿಯದೇ ಆರ್ ಬಿಐ ಗೌರ್ನರ್ ರಾಜೀನಾಮೆ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಂಡ ಸಹ ಆರ್ ಬಿಐ ಗೆ ಬೇರೆ ರೂಪ ಕೊಡುವುದಕ್ಕೆ ಯತ್ನಿಸುತ್ತಿದೆ.
ಇನ್ನು ಎರಡನೇಯದ್ದಾಗಿ ಮೂರು ರಾಜ್ಯಗಳ ಚುನಾವಣೆ ಸೋಲಿನಿಂದ ಉಂಟಾಗಿರುವ ಜನಾಭಿಪ್ರಾಯವನ್ನು ಇನ್ನಾರು ತಿಂಗಳಲ್ಲಿ ಬದಲಾವಣೆ ಮಾಡಬೇಕಿರುವ ಅನಿವಾರ್ಯತೆ ಇದ್ದು, ಆರ್ ಬಿಐ ನ ಸಹಾಯದಿಂದ ಕೃಷಿ ಸಮಸ್ಯೆ, ನಗರ ಉದ್ಯೋಗಗಳಲ್ಲಿ ದುರ್ಬಲ ಬೆಳವಣಿಗೆಯ ವಿಷಯಗಳನ್ನು ಬಗೆಹರಿಸಬೇಕಿದೆ. ಇತ್ತ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟ್ ಇತ್ಯರ್ಥಗೊಳ್ಳದೇ, ಸಾಲವನ್ನ ಪೂರ್ಣ ಸಂಗ್ರಹಿಸುವರೆಗೆ ಯಾರಿಗೂ ಮರು ಸಾಲ ಕೊಡುವ ಹಾಗಿಲ್ಲ ಎಂದು ಆರ್ ಬಿಐ ನಿರ್ಬಂಧ ವಿಧಿಸಿದೆ. ಇಂತಹ ಕಠಿಣ ನಡೆಯಿಂದ ವ್ಯಾಪಾರ ಉದ್ದಿಮೆ ಕುಸಿಯುತ್ತದೆ ಎನ್ನುತ್ತದೆ. ತಾವು ತೆಗೆದುಕೊಂಡ ಸಾಲದ 80 ಪ್ರತಿಶತ ಸಾಲವನ್ನ ತೀರಿಸಿದವರನ್ನ ಸುಸ್ತಿದಾರ ಎನ್ನಲಾಗುವುದಿಲ್ಲ ಅಂತವರಿಗೆ ಮರುಸಾಲ ಕೊಟ್ಟರೆ ಉದ್ಯಮ ಚೇತರಿಸಿಕೊಂಡು ಅವರು ತಮ್ಮ ಸಾಲವನ್ನ ಪೂರ್ಣ ವಾಪಸ್ಸು ಕೊಡಲು ಸಾಧ್ಯ ಎನ್ನುವುದು ಕೇಂದ್ರದ ನಿಲುವು. ಈ ವಿಷಯವಾಗಿ ಹಾಗೂ ಆರ್ ಬಿಐ ನ ಸೆಕ್ಷನ್ 7 ವಿಷಯವಾಗಿ ಉರ್ಜಿತ್ ಪಟೇಲ್ ಹಾಗೂ ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಆದರೆ ಹೊಸ ಆರ್ ಬಿಐ ಗೌರ್ನರ್ ನ್ನು ಮುಂದಿಟ್ಟುಕೊಂಡು ಮೋದಿ 2019 ಕ್ಕೆ ಪೂರಕವಾಗುವ ರೀತಿಯಲ್ಲಿ ಆರ್ ಬಿಐ ನ್ನು ನಿರ್ವಹಣೆ ಮಾಡಿವುದರ ಬಗ್ಗೆ ಕುತೂಹಲ ಮೂಡಿದ್ದು ಹೂಡಿಕೆದಾರರಲ್ಲಿ ಆತಂಕವೂ ಮೂಡಿದೆ.
ಉರ್ಜಿತ್ ಪಟೇಲ್ ತಮ್ಮ ಹುದ್ದೆ ತ್ಯಜಿಸುತ್ತಿದ್ದಂತೆಯೇ ಅವರ ರಾಜೀನಾಮೆ ಭಾರತೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತ್ತು, ನಿರ್ಬಂಧ ವಿಧಿಸಿರುವ ಆರ್ ಬಿಐ ನ ಬಾಸ್ ನಿರ್ಗಮನದ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಸೂಚ್ಯಂಕ ಶೇ.2.65 ರಷ್ಟು ಏರಿಕೆಯಾಗಿತ್ತು. ಆರ್ ಬಿಐ-ಕೇಂದ್ರ ಸರ್ಕಾರ- ಮೋದಿ ಜನಪ್ರಿಯತೆ ಈ ಮೂರೂ ಅಂಶಗಳು ಸಧ್ಯಕ್ಕೆ ಒಂದಕ್ಕೆ ಒಂದು ಪೂರಕ, ಸಧ್ಯಕ್ಕೆ ಮೋದಿಗೆ 2019 ಕ್ಕೆ ತಮ್ಮ ಇಮೇಜ್ ಗೆ ಧಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕಿದೆ. ಅದಕ್ಕಾಗಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಇದರಿಂದಾಗಿ ಹೂಡಿಕೆದಾರರಿಗೆ ಸ್ವಲ್ಪ ಮಟ್ಟಿಗಿನ ಕುತೂಹಲ ಮೂಡಿದ್ದರೆ. ಎಂದಿನಂತೆ ತೆರಿಗೆದಾರರು ಮಾತ್ರ ಆತಂಕ ಪಡುವಂತಾಗಿದೆ. ಒಟ್ಟಾರೆ ಮೋದಿ 2019 ರ ದೃಷ್ಟಿಯಲ್ಲಿ ಅದಿನ್ಯಾವ ನಿರ್ಧಾರ ಕೈಗೊಳ್ಳುತ್ತಾರೋ ಎಂಬ ಆತಂಕ ಒಂದು ವರ್ಗದಲ್ಲಿ ಉಂಟಾಗುತ್ತದೆ ಎಂಬುದಂತೂ ಖಾತ್ರಿ