ನವದೆಹಲಿ: ನನ್ನ ಜೀವನದ ಕೊನೆ ಉಸಿರಿರುವ ತನಕ ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ವಿರುದ್ಧ ಹೈಕೋರ್ಟ್ ನಲ್ಲಿ ಗೆಲುವು ಸಾಧಿಸಿದ ಮಹಿಳೆ ಜಗ್ದೀಶ್ ಕೌರ್ ಅವರು ಅವರು ಹೇಳಿದ್ದಾರೆ.
1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಜಗ್ದೀಶ್ ತನ್ನ ಪತಿ, ಹಿರಿಯ ಪುತ್ರ ಹಾಗೂ ಮೂವರು ಸಹೋದರರನ್ನು ಕಳೆದುಕೊಂಡಿದ್ದು, ಕಳೆದ 34 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಕೌರ್ ಗೆ ಇಂದು ಹೈಕೋರ್ಟ್ ನಲ್ಲಿ ಜಯ ಸಿಕ್ಕಿದ್ದು, ಸುಪ್ರೀಂ ಕೋರ್ಟ್ ನಲ್ಲೂ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.
ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸಜ್ಜನ್ ಕುಮಾರ್ ಗೆ ಜೀವಾವಾಧಿ ಶಿಕ್ಷೆ ವಿಧಿಸಿದೆ. ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕೌರ್, ಸದ್ಯ ನಾನು ಸ್ವಲ್ಪ ನಿರಾಳವಾಗಿದ್ದೇನೆ. ಆದರೆ ನ್ಯಾಯಕ್ಕಾಗಿ ನಾನು ಕೊನೆ ಉಸಿರಿರುವ ತನಕ ಹೋರಾಡುತ್ತೇನೆ. ಕೋರ್ಟ್ ಗಳು ಇದುವರೆಗೆ ಕೇವಲ ಸಾಮಾನ್ಯ ಜನರಿಗೆ ಮಾತ್ರ ಶಿಕ್ಷೆ ವಿಧಿಸಿವೆ. ಆದರೆ ಮೊದಲ ಬಾರಿಗೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಪ್ರಭಾವಿ ಕಾಂಗ್ರೆಸ್ ನಾಯಕನಿಗೆ ಶಿಕ್ಷೆ ನೀಡಿದೆ ಎಂದು ಹೇಳಿದ್ದಾರೆ.
ಸಜ್ಜನ್ ಕುಮಾರ್ ಅವರು ಒಬ್ಬ ಪ್ರಭಾವಿ ರಾಜಕಾರಣಿಯಾಗಿರುವುದರಿಂದ ರಾಜಕೀಯ ಒತ್ತಡವಿತ್ತು. ಸರ್ಕಾರದಲ್ಲಿರುವ ಪ್ರತಿಯೊಬ್ಬರು ಆರೋಪಿಯನ್ನು ರಕ್ಷಿಸುತ್ತಿದ್ದರು. ಹೀಗಾಗಿ ನನಗೆ ನ್ಯಾಯ ಸಿಗುವುದಿಲ್ಲ ಎಂದು ಜನ ಹೇಳುತ್ತಿದ್ದರು. ಆದರೆ ಸುದೀರ್ಘ ಹೋರಾಟದ ನಂತರ ನನಗೆ ಹೈಕೋರ್ಟ್ ನಲ್ಲಿ ನ್ಯಾಯ ಸಿಕ್ಕಿದೆ. ಈಗ ಮತ್ಕೆ ನ್ಯಾಯಾಂಗದ ಮೇಲೆ ವಿಶ್ವಾಸ ಹೆಚ್ಚಾಗಿದೆ ಎಂದು ಕೌರ್ ತಿಳಿಸಿದ್ದಾರೆ.
ಸಜ್ಜನ್ ಕುಮಾರ್ ವಿರುದ್ಧ ದೂರು ನೀಡಿದ್ದಕ್ಕೆ ಇಂದು ಅಸ್ತಿತ್ವದಲ್ಲಿರದ ಟಾಡಾ ಕಾಯ್ದೆಯಡಿ ನನ್ನ ವಿರುದ್ಧ ಕೇಸನ್ನು ದಾಖಲಿಸಲಾಯಿತು. ನನಗೆ ಸಿಖ್ ಭಯೋತ್ಪಾದಕರೊಂದಿಗೆ ಸಂಪರ್ಕವಿದೆ ಎಂದು ಸುಳ್ಳು ದೂರನ್ನು ದಾಖಲಿಸಿ ಜೈಲಿಗೆ ಕಳುಹಿಸಿದ್ದರು ಎಂದು ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿರುವ ನಿರ್ಪೀತ್ ಕೌರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos