ದೇಶ

ಚಲಿಸುತ್ತಿದ್ದ ರೈಲಿನಿಂದ ತುಂಬು ಗರ್ಭಿಣಿಯನ್ನು ಹೊರಗೆ ತಳ್ಳಿದ ದರೋಡೆಕೋರರು: ಹೊಟ್ಟೆಯಲ್ಲಿದ್ದ ಮಗು ಸಾವು

Manjula VN
ವಿಜಯವಾಡ: ಚಲಿಸುತ್ತಿದ್ದ ರೈಲಿನಿಂದ ತುಂಬು ಗರ್ಭಿಣಿಯನ್ನು ದರೋಡೆಕೋರರು ಹೊರಗೆ ತಳ್ಳಿರುವ ಘಟನೆ ಮಂಗಳವಾರ ನಡೆದಿದೆ. 
ಬೆಂಗಳೂರಿನ ಕೊಂಡವೀಡು ಎಕ್ಸ್'ಪ್ರೆಸ್ ಧರ್ಮಾವರಂನ ಗೊಲ್ಲಪ್ಪಲ್ಲಿ ಬಳಿ ಚಲಿಸುತ್ತಿದ್ದ ವೇಳೆ ಘಟನೆ ನಡೆದಿದೆ. 
24 ವರ್ಷದ ದಿವ್ಯಾ ಶ್ರೀಯವರು ತಮ್ಮ ಅತ್ತೆಯವರೊಂದಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದರು. ದಿವ್ಯಾ ಅವರ ಪತಿ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಮೂರು ದಿನಗಳ ಹಿಂದಷ್ಟೇ ದಂಪತಿಗಳು ಪಿಡುಗುರಲ್ಲಾಗೆ ಭೇಟಿ ನೀಡಿದ್ದರು. ನಂತರ ಶ್ರೀನಿವಾಸ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಬಳಿಕ ದಿವ್ಯಾ ಅವರು ತಮ್ಮ ಅತ್ತೆ ಜೊತೆಗೆ ಸೋಮವಾರ ರಾತ್ರಿ ಬೆಂಗಳೂರಿಗೆ ಆಗಮಿಸಲು ರೈಲು ಹತ್ತಿದ್ದರು. ಮಂಗಳವಾರ ಬೆಳಗಿನ ಜಾವ 5.30ರ ಸುಮಾರಿಗೆ ದಿವ್ಯಾ ಅವರು ಶೌಚಾಲಯಕ್ಕೆ ತೆರಳಿ ಮರಳಿ ಬರುತ್ತಿದ್ದ ವೇಳೆ ರೈಲಿನ ಬಾಗಿಲ ಬಳಿ ನಿಂತಿದ್ದ ಅನಾಮಧೇಯ ವ್ಯಕ್ತಿಯೊಬ್ಬ ಆಕೆಯನ್ನು ರೈಲಿನಿಂದ ಕೆಳಗೆ ತಳ್ಳಿದ್ದಾನೆ. 
ಬಳಿಕ ಆತನೂ ಕೂಡ ರೈಲಿನಿಂದ ಜಂಪ್ ಮಾಡಿದ್ದಾರೆ. ನಂತರ ಮಹಿಳೆ ಮೇಲೆ ದೌರ್ಜನ್ಯ ಎಸಗಿರುವ ದುಷ್ಕರ್ಮಿ ಆಕೆ ತೊಟ್ಟಿದ್ದ ಆಭರಣಗಳನ್ನು ಕಿತ್ತು ಸ್ಥಳದಿಂದ ಪರಾರಿಯಾಗಿದ್ದಾನೆ. ರೈಲಿನಿಂದ ಕೆಳಗೆ ಬೀಳುತ್ತಿದ್ದಂತೆಯೇ ದಿವ್ಯಾ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. 
ಬಳಿಕ ಕೆಲ ಸ್ಥಳೀಯರು ಆಕೆಯನ್ನು ರಕ್ಷಿಸಿ ಅನಂತಪುರದಲ್ಲಿರುವನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಿವ್ಯಾ ಅವರು ಅತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದು, ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರೈಲ್ವೇ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದು, ದುಷ್ಕರ್ಮಿಗಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ. 
SCROLL FOR NEXT