ಕೊಚ್ಚಿ: ಅಯ್ಯಪ್ಪ ಸ್ವಾಮಿ ಭಕ್ತರ ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ಶಬರಿಮಲೆಯಲ್ಲಿ ದರ್ಶನ ಪಡೆಯದೇ ವಾಪಸಾದ ಮಾನಿತಿ ಸಂಘಟನೆ ಸದಸ್ಯರು ಮತ್ತೆ ಶಬರಿಮಲೆಗೆ ಬರುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಭಾನುವಾರ ಶಬರಿಮಲೆ ಬೆಟ್ಟದಲ್ಲಿ ನಡೆದ ಹೈಡ್ರಾಮಾ ಬಳಿಕ ಅಯ್ಯಪ್ಪಸ್ವಾಮಿ ದರ್ಶನವಿಲ್ಲದೇ ವಾಪಸ್ ಆಗಿದ್ದ ತಮಿಳುನಾಡಿನ ಮಾನಿತಿ ಸಂಘಟನೆಯ 11 ಮಹಿಳೆಯರು ಮತ್ತೆ ಕೇರಳ ಪೊಲೀಸರ ರಕ್ಷಣೆ ಪಡೆದು ಶಬರಿಮಲೆಗೆ ಬರುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಶಬರಿಮಲೆಯಿಂದ ವಾಪಸ್ ತೆರಳುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘಟನೆ ಸದಸ್ಯೆಯೊಬ್ಬರು, ಪ್ರಸ್ತುತ ಅಯ್ಯಪ್ಪ ಸ್ವಾಮಿ ದರ್ಶನ ಸಾಧ್ಯವಾಗಿಲ್ಲ. ಆದರೆ ತಮಗೆ ರಕ್ಷ ಣೆ ನೀಡಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ನ್ಯಾಯಾಲಯ ಮತ್ತು ಕೇರಳ ಪೊಲೀಸರಿಂದ ಭದ್ರತೆಯ ಆಶ್ವಾಸನೆ ದೊರೆತ ಬಳಿಕ ಮತ್ತೆ ಶಬರಿಮಲೆಗೆ ಬಂದು ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ಈ ಮಧ್ಯೆ ಭಾನುವಾರದ ಘಟನೆ ಮತ್ತೆ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ. 'ಮಾನಿತಿ' ಸಂಘಟನೆಯ ಮಹಿಳೆಯರ ದೇಗುಲ ಪ್ರವೇಶ ಪೂರ್ವಯೋಜಿತವಾಗಿದ್ದು, ಇದಕ್ಕೆ ಆಡಳಿತಾರೂಢ ಸಿಪಿಐ-ಎಂ ನೇತೃತ್ವದ ಎಲ್ ಡಿಎಫ್ ಸರ್ಕಾರದ ಹಸ್ತಕ್ಷೇಪವಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಪಿಣರಾಯಿ ವಿಜಯನ್ ಸರ್ಕಾರ, ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಿರುವುದಾಗಿ ಸಮರ್ಥಿಸಿಕೊಂಡಿದೆ. ''ಹೈಕೋರ್ಟ್ ರಚಿಸಿರುವ ತ್ರಿಸದಸ್ಯ ಸಮಿತಿಯು ಈ ಪ್ರಕರಣವನ್ನು ಪರಿಶೀಲಿಸಲಿದ್ದು ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಸಮಿತಿಯ ತೀರ್ಮಾನದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ,'' ಎಂದು ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos