ಅಮರಾವತಿ: ಶಾಲಾ ವಿದ್ಯಾರ್ಥಿಯೊಬ್ಬನಿಗೆ ಮೂತ್ರ ಮಿಶ್ರಿತ ಹಣ್ಣಿನ ರಸವನ್ನು ಬಲವಂತವಾಗಿ ಕುಡಿಸಿದ್ದ ಆರೋಪದಡಿಯಲ್ಲಿ ಆಂಧ್ರಪ್ರದೇಶ ಶಾಲಾ ಶಿಕ್ಷಕನನ್ನು ಬಂಧಿಸಲಾಗಿದೆ.
ಆರೋಪಿಯನ್ನು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ವಿಜಯ ಕುಮಾರ್ ಎಂದು ಗುರುತಿಸಲಾಗಿದ್ದು ಈತ ಚಿರಾಲ–ಪೆರಾಲ ನಗರದ ಎಸ್ಪಿಆರ್ ವಿದ್ಯಾ ಕಾನ್ಸೆಪ್ಟ್ ಶಾಲೆಯ ದೈಹಿಕ ಶಿಕ್ಷಕನಾಗಿದ್ದ.
ವಿದ್ಯಾರ್ಥಿಯೊಬ್ಬ ಸಹಪಾಠಿ ಬಾಲಕಿಯು ತಂದಿದ್ದ ಹಣ್ಣಿನ ರಸಕ್ಕೆ ಮೂತ್ರ ಬೆರೆಸಿದ್ದನು. ಅದನ್ನರಿಯದೆ ಆಕೆ ಹಣ್ಣಿನ ರಸ ಕುಡಿಯಹೋದಾಗ ವಿದ್ಯಾರ್ಥಿ ಅದನ್ನು ಕುಡಿಯದಂತೆ ತಡೆದಿದ್ದನು. ಆದರೆ ಸ್ನೇಹಿತನ ವರ್ತನೆಯಿಂದ ನೊಂದ ವಿದ್ಯಾರ್ಥಿನಿ ಈ ಸಂಬಂಧ ದೈಹಿಕ ಶಿಕ್ಷಕನಲ್ಲಿ ದೂರಿತ್ತಿದ್ದಾಳೆ. ದೂರಿನ ಹಿನ್ನೆಲೆ ವಿಚಾರಣೆ ನಡೆಸಿದ ಶಿಕ್ಷಕ ವಿದ್ಯಾರ್ಥಿ ತನ್ನ ತಪ್ಪನ್ನು ಒಪ್ಪಿ ಕ್ಷಮೆ ಕೇಳಿದರೂ ಬಿಡದೆ ಅದೇ ಹಣ್ಣಿನ ರಸವನ್ನು ಬಲವಂತವಾಗಿ ಕುಡಿಸೈದ್ದಾನೆ.
ಈ ವಿಚಾರವನ್ನು ತಿಳಿದ ವಿದ್ಯಾರ್ಥಿಯ ಪೋಷಕರು ಶಿಕ್ಷಕನ ವಿರುದ್ಧ ಪೋಲೀಸರಿಗೆ ದೂರಿತ್ತಿದ್ದಾರೆ. "ದೂರಿನ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂಧಿಸಿದ್ದು ಐಪಿಸಿ ಸೆಕ್ಷನ್ 270 ಮತ್ತು 75ರಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ." ಪೊಲೀಸ್ ಇನ್ಸ್ಪೆಕ್ಟರ್ ಪಿಎ ಸೂರ್ಯನಾರಾಯಣ ಹೇಳಿದ್ದಾರೆ.