ಕೋಲ್ಕತಾದಲ್ಲಿ ಮಮತಾ ಭೇಟಿಯಾದ ಹಾರ್ದಿಕ್ (ಟ್ವಿಟರ್ ಚಿತ್ರ)
ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೇಡಿ ಗಾಂಧಿ, ಅವರ ನೇತೃತ್ವದಲ್ಲಿ ವಿರೋಧಿ ಒಕ್ಕೂಟ ರಚನೆ ಮಾಡುವುದಾಗಿ ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ನಿನ್ನೆ ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ ಬಳಿಕ ಟ್ವೀಟ್ ಮಾಡಿರುವ ಹಾರ್ದಿಕ್ ಪಟೇಲ್, ಲೇಡಿ ಗಾಂಧಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದು ತುಂಬಾ ಖುಷಿ ನೀಡಿತು. ಸಾಧನೆಯ ಅನ್ವರ್ಥ ಪದವೇ ಮಮತಾ ಬ್ಯಾನರ್ಜಿ.. ಪ್ರಮಾಣಿಕತೆ, ಚತುರತೆ, ಪಾರದರ್ಶಕತೆ ಮತ್ತು ನಮ್ಮ ವೈಚಾರಿಕತ ಮನೋಭಾವಗಳೇ ನಮಗೆ ದೇವರಂತೆ. ಅವುಗಳೇ ನಮ್ಮ ಯಶಸ್ಸಿಗೆ ಕಾರಣವಾಗುತ್ತವೆ ಎಂದು ಹೇಳಿದರು ಎಂದು ಟ್ವೀಟ್ ಮಾಡಿದ್ದಾರೆ.
ಭೇಟಿ ಬಳಿಕ ರಾಜ್ಯ ಸಚಿವಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಬೇಕು ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಯುಕ್ತ ರಂಗದ ನೇತೃತ್ವ ವಹಿಸಬೇಕು. ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಇಡೀ ದೇಶದಲ್ಲಿ ಅತಿದೊಡ್ಡ ವಿರೋಧ ಪಕ್ಷಗಳು. ಸಂಯುಕ್ತ ವಿರೋಧ ಪಕ್ಷಗಳ ನೇತೃತ್ವವನ್ನು ಮಮತಾ ವಹಿಸುವುದು ಸೂಕ್ತ ಎನ್ನುವುದು ನನ್ನ ಅನಿಸಿಕೆ" ಎಂದು ಹೇಳಿದರು.
ಅಂತೆಯೇ ಮಮತಾ ಬ್ಯಾನರ್ಜಿ ಅವರನ್ನು ಇಂದಿರಾಗಾಂಧಿ ಜತೆ ಹೋಲಿಸಿದ ಹಾರ್ದಿಕ್ ಪಟೇಲ್, 2019ರಲ್ಲಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿ, ಟಿಎಂಸಿ ಪರ ಪ್ರಚಾರ ಮಾಡುವುದಾಗಿ ಭರವಸೆ ನೀಡಿದರು. 'ಕುರ್ಮಿ ಸಮುದಾಯಕ್ಕೆ ಪರಿಶಿಷ್ಟ ಪಂಗಡಗಳ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಮಮತಾ ಬ್ಯಾನರ್ಜಿಯವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ನಾನು ಇದನ್ನು ಬೆಂಬಲಿಸುತ್ತೇನೆ. ಏಕೆಂದರೆ ಬಂಗಾಳದಲ್ಲಿ ಕುರ್ಮಿಗಳ ಸ್ಥಾನಮಾನವನ್ನೇ ಗುಜರಾತ್ ನಲ್ಲಿ ಪಟೇಲರು ಹೊಂದಿದ್ದಾರೆ" ಎಂದು ಹೇಳಿದರು.
ಮಮತಾ ಬ್ಯಾನರ್ಜಿಯವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದು, ಗುಜರಾತ್ ನಲ್ಲಿ ಪಕ್ಷದ ನೇತೃತ್ವ ವಹಿಸುವಂತೆ ಕೋರಿದ್ದಾರೆ ಎಂದು ಅವರು ಸ್ಪಷ್ಟ ಪಡಿಸಿದರು. ಸಕ್ರಿಯ ರಾಜಕಾರಣಕ್ಕೆ ಬರುವುದಾದರೆ ಈ ಪ್ರಸ್ತಾವವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮಮತಾಗೆ ಸ್ಪಷ್ಟಪಡಿಸಿದ್ದಾಗಿ ಹಾರ್ದಿಕ್ ವಿವರಿಸಿದರು. ಇನ್ನು ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಪಟೇಲ್ ಅವರ ಈ ಭೇಟಿ ವಿಶೇಷ ಮಹತ್ವ ಪಡೆದಿದೆ.