ಲಖನೌ: ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರ ಸಂಘಟನೆಗಳಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್'ಬಿ)ಕೂಡ ಒಂದಾಗಿದ್ದು, ಅದನ್ನು ನಿಷೇಧಿಸಬೇಕು ಎಂದು ಶಿಯಾ ವಕ್ಫ್ ಮಂಡಳಿ ಭಾನುವಾರ ಹೇಳಿದೆ.
ಈ ಕುರಿತಂತೆ ಶಿಯಾ ಕೇಂದ್ರೀಯ ವಕ್ಫ್ ಮಂಡಳಿಯ ಅಧ್ಯಕ್ಷ ವಾಸೀಂ ರಿಜ್ವಿಯವರು ಮಾತನಾಡಿದ್ದು, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಲ್ಲಿರುವ ಉಗ್ರ ಸಂಘಟನೆಗಳು ಭಾರತದಲ್ಲಿರುವ ಮುಸ್ಲಿಮರಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇಂತಹ ಉಗ್ರ ಸಂಘಟನೆಗಳಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೂಡ ಒಂದು ಶಾಖೆಯಾಗಿದೆ, ಇದು ಭಾರತದಲ್ಲಿರುವ ವಾತಾವರಣನ್ನು ಹಾಳು ಮಾಡುತ್ತಿದೆ ಎಂದು ಹೇಳಿದ್ದಾರೆ.
ವಿವಾದಿತ ರಾಮ ಜನ್ಮಭೂಮಿ ಸ್ಥಳದಲ್ಲಿ ರಾಮ ಮಂದಿನ ನಿರ್ಮಾಣವಾಗಬೇಕು. ಧ್ವಂಸಗೊಂಡ ಬಾಬ್ರಿ ಮಸೀದಿಯು ಬೇರೆ ಸ್ಥಳದಲ್ಲಿ ನಿರ್ಮಾಣವಾಗಬೇಕು ಎಂದು ಹೇಳಿದ್ದ ಮೌಲ್ವಿ ಸ್ಮಾನ್ ನದ್ವಿ ಅವರನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್'ಬಿ) ಕಾರ್ಯಕಾರಿಣಿ ಸದಸ್ಯತ್ವದಿಂದ ನಿನ್ನೆಯಷ್ಟೇ ವಜಾ ಮಾಡಿದ್ದರು. ಈ ಹಿನ್ನಲೆಯಲ್ಲಿ ರಿಜ್ವಿಯವರು ಎಐಎಂಪಿಎಲ್'ಬಿ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ನದ್ವಿಯವರಿಗೆ ಬೆಂಬಲ ನೀಡಿರುವ ರಿಜ್ವಿಯವರು, ರಾಮ ಮಂದಿರ ಅಯೋಧ್ಯೆಯಲ್ಲಿಯೇ ನಿರ್ಮಾಣವಾಗಬೇಕು. ವಿವಾದಿತ ಪ್ರದೇಶದಿಂದ ಮಸೀದಿಯನ್ನು ಬೇರೆಡೆ ನಿರ್ಮಾಣ ಮಾಡುವುದೇ ಮುಸ್ಲಿಮರಿಗಿರುವ ಬೇರೆ ದಾರಿ ಎಂದು ತಿಳಿಸಿದ್ದಾರೆ.