ಆಗಸದಲ್ಲಿ ಎರಡು ವಿಮಾನಗಳ ಢಿಕ್ಕಿ ತಪ್ಪಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್: 261 ಜನರ ಜೀವ ಬಚಾವ್
ಮುಂಬೈ: ಆಗಸದ ಮದ್ಯದಲ್ಲಿ ಎರಡು ವಿಮಾನಗಳ ನಡುವೆ ಸಂಭವಿಸಲಿದ್ದ ಭೀಕರ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿ ಹೋದ ಘಟನೆ ಮುಂಬೈನಲ್ಲಿ ನಡೆದಿದೆ. ಏರ್ ವಿಸ್ತಾರ ಹಾಗೂ ಏರ್ ಇಂಡಿಯಾ ವಿಮಾನಗಳ ನಡುವೆ ಸಂಬವಿಸಲಿದ್ದ ಢಿಕ್ಕಿಯನ್ನು ಮಹಿಳಾ ಪೈಲಟ್ ಒಬ್ಬರು ತಮ್ಮ ಸಮಯಪ್ರಜ್ಞೆಯಿಂದ ತಪ್ಪಿಸಿದ್ದಾರೆ.
ಬುಧವಾರ ರಾತ್ರಿ ಎಂಟರ ಸುಮಾರಿಗೆ ಮುಂಬೈನ ವಾಯುಯಾನ ಮಾರ್ಗದ ನಡುವೆ ಈ ಘಟನೆ ಸಂಭವಿಸಿದ್ದು ಅಪಘಾತಕ್ಕೆ ಈಡಾಗಬಹುದಾಗಿದ್ದ ಎರಡು ವಿಮಾನಗಳಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ ಒಟ್ಟು 261 ಮಂದಿ ಇದ್ದರು. ಏರ್ ವಿಸ್ತಾರಾ ವಿಮಾನವು ನಿಗದಿತ ಮಟ್ಟಕ್ಕಿಂತಲೂ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದದ್ದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಏರ್ ವಿಸ್ತಾರದ ಪೈಲಟ್ ಶೌಚಾಲಯಕ್ಕೆ ತೆರಳಿದ್ದರು, ಆಗ ಮಹಿಳಾ ಸಹ ಪೈಲಟ್ ಒಬ್ಬರು ವಿಮಾಣ ಚಲಾಯಿಸುತ್ತಿದ್ದರು. ಇದೇ ವೇಳೆ ಏರ್ ಇಂಡಿಯಾ ವಿಮಾನದಲ್ಲಿಯೂ ಮಹಿಳಾ ಪೈಲಟ್ ಕ್ಯಾಪ್ಟನ್ ಅನುಪಮಾ ಕೊಹ್ಲಿ ಇದ್ದರು.
ಈ ವೇಳೆ ಏರ್ ಟ್ರಾಫಿಕ್ ಕಂಟ್ರೋಲರ್ ಹಾಗೂ ಏರ್ ವಿಸ್ತಾರದ ನಡುವೆ ಸಂಪರ್ಕದಲ್ಲಿ ಗೊಂದಲ ಉಂಟಾಗಿತ್ತು. ಆದರೆ ಏರ್ ಇಂಡಿಯಾದಲ್ಲಿದ್ದ ಅನುಪಮಾ ಅವರು ಎದುರಿನಿಂಡ ಇನ್ನೊಂಡು ವಿಮಾನ ಬರುತ್ತಿರುವುದು ಕಂಡು , ವಿಸ್ತಾರದ ಯುಕೆ 997 ವಿಮಾನಕ್ಕೆ ಎಟಿಸಿ ಮೂಲಕ ಎಚ್ಚರಿಕೆ ಸಂದೇಶ ನೀಡಿದ್ದರು, ತಮ್ಮ ಏರ್ ಇಂಡಿಯಾ ವಿಮಾಣವನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಿದರು. ಇದರಿಂದಾಗಿ ಘೋರ ದುರಂತವೊಂದು ತಪ್ಪಿ ಪ್ರಯಾಣಿಕರ ಪ್ರಾಣ ಉಳಿದಿತ್ತು.
ವಿಸ್ತಾರ ಯುಕೆ-997 ವಿಮಾನವು ದೆಹಲಿಯಿಂದ ಪುಣೆಗೆ ತೆರಳುತ್ತಿದ್ದರೆ ಏರ್ ಇಂಡಿಯಾದ ಎಐ 631 ವಿಮಾನವು ಮುಂಬಯಿನಿಂದ ಭೋಪಾಲ್ ನತ್ತ ಪ್ರಯಾಣ ಬೆಳೆಸಿತ್ತು. ವಿಸ್ತಾರದಲ್ಲಿ 152 ಪ್ರಯಾಣಿಕರಿದ್ದರೆ ಏರ್ ಇಂಡಿಯಾದಲ್ಲಿ 109 ಪ್ರಯಾಣಿಕರಿದ್ದರು. ಪ್ರಕರಣ ಸಂಬಂಧ ಏರ್ ವಿಸ್ತಾರ ಇಬ್ಬರು ಪೈಲಟ್ಗಳನ್ನು ಅಮಾನತು ಮಾಡಿ ವಿಮಾನಯಾನ ಮಹಾನಿರ್ದೇಶಕ ಆದೇಶ ಹೊರಡಿಸಿದ್ದಾರೆ. ಅಲ್ಲದೆ ವಿಮಾನ ಅಪಘಾತ ತನಿಖಾ ದಳ (ಎಎಐಬಿ) ತನಿಖೆ ಕೈಗೊಳ್ಳಲಿದೆ.