ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಆರ್.ಕೆ. ಸಿಂಗ್
ನವದೆಹಲಿ; ಭ್ರಷ್ಟ ಅಧಿಕಾರಿಗಳ ಕತ್ತು ಸೀಳುವೆ ಎಂಬ ಹೇಳಿಕೆಗೆ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಆರ್.ಕೆ. ಸಿಂಗ್ ಅವರು ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ಆಯೋಜಿಸಿದ್ದ ಇಂಡಿಯಾ ಇನ್ಫ್ರಾಕಾನ್ ಕಾಂಕ್ಲೇವ್ 2018 ಕಾರ್ಯಕ್ರಮದ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿರುವ ಅವರು, ಈ ಹಿಂದೆ ತಾವು ನೀಡಿದ್ದ ಭ್ರಷ್ಟ ಅಧಿಕಾರಿಗಳ ಕತ್ತು ಸೀಳುವೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಸರ್ಕಾರದ ಯೋಜನೆಗಳ ಕುರಿತು ಯಾರಾದರೂ ತಕರಾರು ಎತ್ತಿದರೆ ಅಥವಾ ಸುಖಾಸುಮ್ಮನೆ ವಿಷಯ ಮಾಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆಂಬ ಅರ್ಥದಲ್ಲಿ ನಾನು ಆ ರೀತಿ ಹೇಳಿಕೆಯನ್ನು ನೀಡಿದ್ದೆ. ನಾನು ಭ್ರಷ್ಟಾಚಾರವನ್ನು ದ್ವೇಷಿಸುತ್ತೇನೆಂದು ನನ್ನ ಬಗ್ಗೆ ಗೊತ್ತಿರುವವರಿಗೆ ತಿಳಿದಿರುತ್ತದೆ ಎಂದು ಹೇಳಿದ್ದಾರೆ.
ನಾವು ಚಿಕ್ಕವರಿದ್ದಾಗ ನಮ್ಮ ತಾಯಂದಿರು ಕೆಟ್ಟ ಬುದ್ದಿ ಕಲಿತರೆ ಕತ್ತು ಸೀಳುತ್ತೇನೆಂದು ಹೇಳುತ್ತಿದ್ದರು. ಆದರೆ, ಆ ರೀತಿ ಅವರು ಎಂದಿಗೂ ಮಾಡುತ್ತಿರಲಿಲ್ಲ. ಹಾಗೆಯೇ ನಾನು ಹೇಳಿಕೆಯನ್ನು ನೀಡಿದ್ದೆ ಎಂದು ತಿಳಿಸಿದ್ದಾರೆ.
ಜ.27ರಂದು ಬಿಹಾರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಂಗ್ ಅವರು, ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಕುತ್ತಿಗೆ ಸೀಳುತ್ತೇನೆಂದು ಹೇಳಿದ್ದರು.
ಜನರಿಗೆ ಉಪಯೋಗವಾಗುವ ಹಾಗೂ ಸಹಾಯವಾಗುವ ಯೋಜನೆಗಳು ಮಾತ್ರ ಅಂಗೀಕಾರಗೊಳ್ಳುತ್ತವೆ. ಯೋಜನೆಯ ಗುತ್ತಿಗೆ ಹಾಗೂ ನಿರ್ಮಾಣ ಕಾರ್ಯಗಳು ಪಾರದರ್ಶಕವಾಗಿರಲಿದೆ. ಯಾವುದೇ ಕೆಲಸ ಕಾರ್ಯಗಳು ನಡೆದರೂ ಅಲ್ಲಿ ನನ್ನ ಹೆಸರಿದ್ದೇ ಇರುತ್ತದೆ. ಹೀಗಾಗಿ ಯಾವುದೇ ಕೆಲಸದಲ್ಲಿಯೇ ಆದರೂ ಭ್ರಷ್ಟಾಚಾರ ನಡೆದರೆ, ಅಂತಹ ಅಧಿಕಾರಿಗಳ ಕತ್ತು ಸೀಳುತ್ತೇನೆ, ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸುತ್ತೇನೆಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos