ನವದೆಹಲಿ: ಮುಸ್ಲಿಮರ ದೇಶಭಕ್ತಿ ಕುರಿತಂತೆ ಹೇಳಿಕೆ ನೀಡಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಓವೈಸಿ ಹೇಳಿಕೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಓವೈಸಿಯವರು ಹುತಾತ್ಮರಾದ ಮುಸ್ಲಿಂ ಯೋಧರನ್ನು ಲೆಕ್ಕ ಹಾಕುತ್ತಿದ್ದಾರೆ. ಆದರೆ, ಎಷ್ಟು ಜನ ಮುಸ್ಲಿಮರು ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿ ಯೋಧರ ಮೇಲೆ ದಾಳಿ ನಡೆಸುತ್ತಿದ್ದಾರೆಂಬುದನ್ನು ಲೆಕ್ಕ ಹಾಕಬಲ್ಲರೇ? ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಮರ ರಾಷ್ಟ್ರಪ್ರೇಮ ಕುರಿತಂತೆ ಪ್ರಶ್ನೆ ಎತ್ತುತ್ತಿದ್ದವರ ವಿರುದ್ಧ ಈ ಹಿಂದೆ ತೀವ್ರವಾಗಿ ಕಿಡಿಕಾರಿದ್ದ ಓವೈಸಿ, ಸುಂಜುವಾನ್ ಸೇನಾ ಕ್ಯಾಂಪ್ ಮೇಲಿನ ದಾಳಿಯಲ್ಲಿ ಹುತಾತ್ಮರಾದ 7 ಯೋಧರ ಪೈಕಿ ಐವರು ಯೋಧರು ಕಾಶ್ಮೀರದ ಮುಸ್ಲಿಮರು. ಅವರ ತ್ಯಾಗವನ್ನು ನೋಡಿ ಈಗ ಎಲ್ಲರೂ ಮೌನವಹಿಸಿದ್ದಾರೆ. ಯಾಕೀ ಮೌನ ಎಂದು ಪ್ರಶ್ನಿಸಿದ್ದರು. ಓವೈಸಿಯವರ ಹೇಳಿಕೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದರು.
ಓವೈಸಿ ಹೇಳಿಕೆಗೆ ತಿರುಗೇಟು ನೀಡಿದ್ದ ಭಾರತೀಯ ಸೇನೆ, ಹುತಾತ್ಮ ಯೋಧರನ್ನು ನಾವು ಕೋಮುವಾದೀಕರಣಗೊಳಿಸುವುದಿಲ್ಲ. ಈ ರೀತಿ ಅಸಂಬದ್ಧ ಹೇಳಿಕೆ ನೀಡುವವರಿಗೆ ಸೇನೆಯ ಬಗ್ಗೆ ಸರಿಯಾಗಿ ಗೊತ್ತಿಲ್ಲವೆಂದು ಹೇಳಿತ್ತು.